ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತರ ಲಾಬಿ?

Last Updated 9 ಸೆಪ್ಟೆಂಬರ್ 2017, 5:46 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಶಾಸಕ–ಸಚಿವರ ನಡುವಿನ ಶೀತಲ ಸಮರ ಮುಂದುವರಿದಿದೆ. ಕೆಪಿಸಿಸಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಪ್ರಸ್ತಾಪವಾ ಗುತ್ತಿದ್ದಂತೆ ಶಾಸಕರಾದ ಶಿವಾನಂದ ಪಾಟೀಲ, ಸಿ.ಎಸ್‌.ನಾಡಗೌಡ, ಯಶವಂತರಾಯಗೌಡ ಪಾಟೀಲ ಬಣ ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಸುಣಗಾರ ಅವರನ್ನೇ ಮತ್ತೆ ಕೂರಿಸಲು ಕಸರತ್ತು ಆರಂಭಿಸಿದೆ.

ಇದಕ್ಕೆ ಪ್ರತಿಯಾಗಿ ಸಚಿವ ಎಂ.ಬಿ.ಪಾಟೀಲ ಯಾವುದೇ ಕಾರಣಕ್ಕೂ ಸುಣಗಾರಗೆ ಮತ್ತೆ ಅವಕಾಶ ನೀಡ ಬಾರದು ಎಂಬ ಪ್ರಬಲ ಹಕ್ಕೊತ್ತಾಯ ವನ್ನು ಕೆಪಿಸಿಸಿ ಹಂತದಲ್ಲಿ, ಸಿಂದಗಿ ತಾಲ್ಲೂಕಿನ ತಮ್ಮ ಬೆಂಬಲಿಗ ಪಡೆ ಮೂಲಕ ಮಂಡಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇದರ ಬೆನ್ನಿಗೆ ಸದ್ದಿಲ್ಲದೆ ಶಾಸಕ ಪ್ರೊ.ರಾಜು ಆಲಗೂರ, ಡಾ.ಮಕ್ಬೂಲ್‌ ಎಸ್‌.ಬಾಗವಾನ ಸಹಮತದೊಂದಿಗೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಮಸಾಲಿ ಸಮಾಜದ ಮುಖಂಡರೊಬ್ಬರನ್ನು ತನ್ನ ಆಪ್ತ ವಲಯದ ಸಲಹೆ ಮೇರೆಗೆ ಜಿಲ್ಲಾ ಅಧ್ಯಕ್ಷ ಗಾದಿಗೆ ಕೂರಿಸುವ ಯತ್ನವನ್ನು ತೆರೆ ಮರೆಯಲ್ಲಿ ನಡೆಸಿದ್ದರು.

ಇದಕ್ಕೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿತ್ತು. ‘ರವಿಗೌಡ ಪಾಟೀಲ ಧೂಳಖೇಡ ನೇಮಕದಂತೆ ಮತ್ತೆ ಮುಖಭಂಗ ಅನುಭವಿಸಬೇಕಾಗುತ್ತದೆ. ಎಲ್ಲ ಶಾಸಕರನ್ನು ಸಂಭಾಳಿಸಿಕೊಂಡು, ಜಿಲ್ಲೆಯ ಚುಕ್ಕಾಣಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ಛಾತಿ ಇರುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿ ಎಂಬ ಬೇಡಿಕೆ ಪ್ರಸ್ತಾಪ ವಾಗುತ್ತಿದ್ದಂತೆ ಸಚಿವರು ತನ್ನ ನಿಲುವಿನಿಂದ ಹಿಂದೆ ಸರಿದರು’ ಎಂದು ಸಚಿವರ ಆಪ್ತ ವಲಯ ತಿಳಿಸಿದೆ.

ಪ್ರಬಲ ಲಾಬಿ:‘ಯಾವುದೇ ಕಾರಣಕ್ಕೂ, ಎಂತಹ ಸ್ಥಿತಿಯಲ್ಲೂ ಶರಣಪ್ಪ ಸುಣಗಾರಗೆ ಮತ್ತೆ ಅವಕಾಶ ಕೊಡ ಬಾರದು ಎಂಬ ಕಠಿಣ ನಿಲುವನ್ನು ಸಚಿವರು ಹೊಂದಿದ್ದಾರೆ ಎಂಬುದು ಆಪ್ತ ವಲಯದಿಂದ ಬಹಿರಂಗಗೊಳ್ಳುತ್ತಿ ದ್ದಂತೆ, ವಿವಿಧ ಜಾತಿ, ಸಮುದಾಯಗಳು ತಮ್ಮ ಹಕ್ಕೊತ್ತಾಯಕ್ಕೆ ಮುಂದಾಗಿವೆ.

ಮುಸ್ಲಿಂ ಸಮಾಜದ 50ಕ್ಕೂ ಹೆಚ್ಚು ಮುಖಂಡರು ಬುಧವಾರ ರಾತ್ರಿ ಸಚಿವ ಎಂ.ಬಿ.ಪಾಟೀಲರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ತಮ್ಮ ಹಕ್ಕು ಮಂಡಿಸಿದ್ದಾರೆ. ಸ್ವಾತಂತ್ರ್ಯ ಪೂರ್ವ, ನಂತರದ ಅವಧಿಯಲ್ಲಿ ಒಮ್ಮೆಯೂ ಜಿಲ್ಲಾ ಕಾಂಗ್ರೆಸ್‌ನ ಚುಕ್ಕಾಣಿ ಮುಸ್ಲಿಂ ಸಮಾಜಕ್ಕೆ ದೊರೆತಿಲ್ಲ.

ಅನಾದಿ ಕಾಲ ದಿಂದಲೂ ಮತದಾನಕ್ಕಷ್ಟೇ ಪರಿಗಣಿ ಸುತ್ತಿದ್ದೀರಿ. ಅನ್ಯ ಪಕ್ಷಗಳಲ್ಲಿ ಮುಸ್ಲಿಮರಿಗೆ ಸ್ಥಾನಮಾನ ನೀಡಲಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂಬ ಮನವಿಯನ್ನು ಸಚಿವರಿಗೆ ಸಲ್ಲಿಸಿದೆವು’ ಎಂದು ನಿಯೋಗದಲ್ಲಿದ್ದ, ಹೆಸರು ಬಹಿರಂಗಪಡಿಸಲಿಚ್ಚಿಸದ ಮುಸ್ಲಿಂ ಸಮಾಜದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಮ್ಮ ಬೇಡಿಕೆಗೆ ನನ್ನ ಸಹಮತಿ ಯಿದೆ. ಹೈಕಮಾಂಡ್‌ನಲ್ಲೂ ಇದನ್ನು ಪ್ರಸ್ತಾಪಿಸುವೆ. ಇದೀಗ ಮೊದಲಿನಂತಿಲ್ಲ. ನೀವೂ ಉಳಿದ ಶಾಸಕರ ಬೆಂಬಲವನ್ನು ಗಿಟ್ಟಿಸಲು ಮುಂದಾಗಿ ಎಂಬ ಹೊಸ ದಾಳವೊಂದನ್ನು ಉರುಳಿಸುವ ಮೂಲಕ ಸಚಿವರು ತಮ್ಮ ಜಾಣ್ಮೆಯ ನಡೆ ಯಿಟ್ಟರು’ ಎಂದು ಅವರು ಹೇಳಿದರು.

‘ಶುಕ್ರವಾರ ನಮ್ಮದೇ ಸಮಾಜದ ಶಾಸಕ ಬಾಗವಾನ ಭೇಟಿಯಾಗಿ ಬೆಂಬಲ ಕೋರಿದ್ದೇವೆ. ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನೆರೆಡು ದಿನಗಳಲ್ಲಿ ಉಳಿದ ನಾಲ್ಕು ಶಾಸಕರನ್ನು ಭೇಟಿಯಾಗಿ ನಮ್ಮ ಹಕ್ಕೊತ್ತಾಯ ಮಂಡಿಸಲಿದ್ದೇವೆ’ ಎಂದು ನಿಯೋಗದಲ್ಲಿದ್ದ ಮುಸ್ಲಿಂ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT