ವೈ.ಎನ್.ಹೊಸಕೋಟೆ: ಗ್ರಾಮದ ಬಸ್ ನಿಲ್ದಾಣದಲ್ಲಿರುವ ನಾಗರ ಕಟ್ಟೆಯಲ್ಲಿನ ಅರಳಿಮರದ ಕಾಂಡದಲ್ಲಿ ಶುಕ್ರವಾರದ ಮುಂಜಾನೆ ಹಾಲು ಒಸರಿ ನಾಗರ ಕಲ್ಲಿನ ಪಕ್ಕಕ್ಕೆ ಬಿದ್ದು ಸಾರ್ವಜನಿಕರಲ್ಲಿ ಅಚ್ಚರಿಯನ್ನು ಮೂಡಿಸಿತು.
ಮರದಿಂದ ಸೋರುತ್ತಿದ್ದ ಬಿಳಿದ್ರಾವಣವನ್ನು ವೀಕ್ಷಿಸಿದ ಜನತೆ 'ಇದು ಒಂದು ಪವಾಡ, ದೈವಶಕ್ತಿ, ಸ್ಥಳಮಹಿಮೆ' ಎಂದು ಮಾತನಾಡಿಕೊಂಡರು. ಹಲವರು ಮರಕ್ಕೆ ಮತ್ತು ಮರದ ಕೆಳಗಿನ ನಾಗರ ಕಲ್ಲಿಗೆ ಪೂಜೆ ಸಲ್ಲಿಸಿದರು.
‘ಮನುಷ್ಯನಂತೆ ಮರಗಳಿಗೂ ನರವ್ಯವಸ್ಥೆ ಇದ್ದು ಮರದ ಎಲ್ಲಾ ಭಾಗಗಳಿಗೂ ಲ್ಯಾಟೆಕ್ಸ್ ದ್ರಾವಣ ಸದಾ ಸರಬರಾಜು ಆಗುತ್ತಿರುತ್ತದೆ. ಮರಗಳಿಗೆ ವಯಸ್ಸಾದಂತೆ ಅದರಲ್ಲಿನ ಅತಿ ಚಿಕ್ಕ ನಾಳಗಳು ಒಡೆದು ಹೋಗಿ ಅಲ್ಲಿ ಹಾಲಿನಂತಹ ಬಿಳಿಯ ಬಣ್ಣದ ಲ್ಯಾಟೆಕ್ಸ್ ದ್ರಾವಣ ಸೋರುವಿಕೆಯಾಗುತ್ತದೆ’ ಎಂದು ಪವಾಡ ರಹಸ್ಯ ಬಯಲು ತಜ್ಞ ಮಂಗಳವಾಡ ಎಂ.ಮಂಜುನಾಥ್ ಹಾಲು ಸೋರುವಿಕೆಯ ಬಗ್ಗೆ ವೈಜ್ಞಾನಿಕ ಕಾರಣ ನೀಡಿದರು.