ಉತ್ತರ ಭಾರತದಲ್ಲಿ ಪ್ರವಾಹದ ಹಾವಳಿ; ನೂರಾರು ಸಾವು
ನವದೆಹಲಿ, ಸೆ. 9– ಬಂಗಾಳ, ಬಿಹಾರ, ಒರಿಸ್ಸ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಪ್ರವಾಹದ ಹಾವಳಿಯಿಂದಾಗಿ ಅನೇಕ ಜನರು ಕೊಚ್ಚಿ ಹೋಗಿದ್ದಾರೆ, ಸಹಸ್ರಾರು ಮನೆಗಳು ನೆಲಸಮವಾಗಿವೆ, ಜನ ಮತ್ತು ಜಾನುವಾರುಗಳಿಗೆ ಅಪಾರ ಹಾನಿಯುಂಟಾಗಿದೆ.
ಬಂಗಾಳದ ಮಿಡ್ನಾಪುರ ಜಿಲ್ಲೆಯ ಕಾಂಟಾಯ್ ವಿಭಾಗದ 400 ಚದರ ಮೈಲಿ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಕ್ಕಿ ಹದಿನೇಳು ಮಂದಿ ನೀರು ಪಾಲಾಗಿದ್ದಾರೆ. ಸುಮಾರು 30–40 ಸಾವಿರ ಮಣ್ಣಿನ ಮನೆಗಳು ಕುಸಿದು ಬಿದ್ದಿವೆಯೆಂದು ಈ ಪ್ರದೇಶಕ್ಕೆ ಭೇಟಿಯಿತ್ತು ಬಂದ ರಾಜ್ಯ ಪರಿಹಾರ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತ್ರಿಗುಣ ಸೇನ್ ಹೇಳಿಕೆ ತಪ್ಪು ಎಂದು ಚಾಗಲಾ
ಮುಂಬೈ, ಸೆ. 9– ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಮಾಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆಯೆಂದೂ, ಈ ನಿರ್ಧಾರದ ಪ್ರಕಟಣೆಯನ್ನು ಮಾತ್ರ ಮುಂದಕ್ಕೆ ಹಾಕಿರುವುದಾಗಿಯೂ ಶ್ರೀ ಎಂ.ಸಿ. ಚಾಗಲಾ ಅವರು ಇಂದು ಇಲ್ಲಿ ತಿಳಿಸಿದರು.
ಕೇಂದ್ರ ಶಿಕ್ಷಣ ಮಂತ್ರಿ ಡಾ. ತ್ರಿಗುಣ ಸೇನ್ ಅವರು ಸರ್ಕಾರವು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲವೆಂದು ಹೇಳಿರುವುದು ತಪ್ಪೆಂದು ಇಂದು ದೆಹಲಿಯಿಂದ ಇಲ್ಲಿಗೆ ಬಂದ ಮಾಜಿ ವಿದೇಶಾಂಗ ಮಂತ್ರಿ ಶ್ರೀ ಚಗಲಾ ಹೇಳಿದರು.