ಮೈಸೂರು: ಅದು ಶಿಕ್ಷಕರ ದಿನಾಚರಣೆ ಸಮಾರಂಭ. ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಿದ ನಂತರ ಗಣ್ಯರು ಮಾತನಾಡುವ ಸರದಿ. ಹಾಗೆ ಮಾತನಾಡಿದವರಲ್ಲಿ ಮಹಾನಗರ ಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್ ಅವರು, ‘ಶಿಕ್ಷಕರು ಶಾಲೆ– ಕಾಲೇಜುಗಳಲ್ಲಿ ಸರಿಯಾಗಿ ಪಾಠ ಮಾಡಿದರೆ ಟ್ಯೂಷನ್ ಹಾವಳಿ ತಪ್ಪಿಸಬಹುದು’ ಎಂದರು. ಅವರು ಮಾತನಾಡುತ್ತಿರುವಾಗಲೇ ಪ್ರೇಕ್ಷಕರ ಸಾಲಿನಲ್ಲಿದ್ದ ಶಿಕ್ಷಕಿಯೊಬ್ಬರು ಎದ್ದು ನಿಂತು ಮೇಯರ್ ಮಾತನಾಡದಂತೆ ಅಡ್ಡಿಪಡಿಸುತ್ತಿದ್ದರು. ಏಕೆಂದರೆ, ಮೇಯರ್ ವಾರ್ಡಿನ ನಿವಾಸಿಯಾದ ಅವರು, ‘ನಾವು ಸರಿಯಾಗಿ ಪಾಠ ಮಾಡ್ತೀವಿ. ಟ್ಯೂಷನ್ ಹೇಳುವವರಿಗೆ ಮಾತ್ರ ಸಲಹೆ ಕೊಡಿ, ಎಲ್ಲರಿಗೆ ಅಲ್ಲ’ ಎಂದು ಜೋರಾಗಿ ಹೇಳುತ್ತಲೇ ಇದ್ದರು.