ಬಾದಾಮಿ: ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ವಾರದಿಂದ ನೀರು ಇಲ್ಲದೇ ರೋಗಿಗಳು ಮತ್ತು ರೋಗಿಗಳ ಆರೈಕೆ ಮಾಡಲು ಜೊತೆಗೆ ಬಂದವರು ಪರದಾಡುವಂತಾಗಿದೆ.
ನೂರು ಹಾಸಿಗೆಯ ಆಸ್ಪತ್ರೆಯಲ್ಲಿ ಅಂದಾಜು 70ಕ್ಕೂ ಅಧಿಕ ರೋಗಿಗಳು ಇದ್ದಾರೆ.
ಆದರೆ ರೋಗಿಗಳು ಮೂಲ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ. ಆಸ್ಪತ್ರೆಯ ವಾರ್ಡ್ಗಳಲ್ಲಿ ನೀರು ಇಲ್ಲದ ಕಾರಣ ಕೆಲವು ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಕೆಲವು ಶೌಚಾಲಯಗಳಲ್ಲಿ ರೋಗಿಗಳು ಹೋಗದಂತಾಗಿವೆ’ ಎಂದು ರೋಗಿಗಳು ಆರೋಪಿಸಿದರು.
‘ನಾವು ದವಾಖಾನಿ ಚೋಲೋ ಐತಿ ಡಾಕ್ಟರು ಚೋಲೊ ಅದರಾಂತ ಇಲ್ಲಿಗೆ ಬಂದಿವ್ರಿ. ಡಾಕ್ಟರ್ ಚೊಲೊ ನೋಡ್ತಾರ. ಆದ್ರ ಇಲ್ಲಿ ಶೌಚಕ್ಕೆ ಹೋಗಾಕ್ ನೀರ ಇಲ್ಲರಿ. ಸಂಡಾಸ್ ಕೋಲಿಗೆ ಕೀಲಿ ಹಾಕ್ಯಾರಿ’ ಎಂದು ರೋಣ ತಾಲ್ಲೂಕಿನ ಹೊನ್ನಿಗನೂರ ಗ್ರಾಮದ ಶಂಕರಗೌಡ ಹೇಳಿದರು.
ಆಸ್ಪತ್ರೆಗೆ ಬಂದು 13 ದಿನಗಳಾಯಿತು. ಸರಿಯಾಗಿ ನೀರು ಇಲ್ಲ. ರೋಗಿಗಳಿಗೆ ಮತ್ತು ಜೊತೆಗೆ ಬಂದವರಿಗೆ ನೀರಿನ ಅವಶ್ಯವಿದೆ ಎಂದು ಅವರು ಹೇಳಿದರು. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳಿಗೆ, ಮಹಿಳೆಯರಿಗೆ, ಹೆರಿಗೆಗೆ ಬಂದ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಶೌಚಾಲಯಗಳು ಅವಶ್ಯವಾಗಿದೆ.
ಆದರೆ ನೀರನ್ನು ಕೆಳಗೆ ಹೋಗಿ ತುಂಬಿಕೊಂಡು ಬಂದು ಬಳಸಬೇಕು. ವೃದ್ಧರಿಗೆ ಮತ್ತು ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಜನ್ನತಬಿ ಮುಲ್ಲನ್ನವರ ಹೇಳಿದರು. ಆಸ್ಪತ್ರೆಯಲ್ಲಿ ನೀರಿಲ್ಲದ ಕಾರಣ ನೀರು ಪೂರೈಸಲು ಬಂದಿದ್ದ ಟ್ಯಾಂಕರ್ ಮರೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡಿದರು.
‘ಶೌಚಾಲಯ ಸ್ವಚ್ಛಮಾಡಿಸುತ್ತೇವೆ. ಮೊದಲಿನ ಕೊಳವೆ ಬಾವಿ ಬತ್ತಿದೆ. ನೀರು ಇಲ್ಲದ ಕಾರಣ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ. ಕೊಳವೆ ಬಾವಿ ಕೊರೆಯಲು ಸ್ಥಳವನ್ನು ಗುರುತಿಸಿದ್ದಾರೆ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರೇವಣಸಿದ್ದಪ್ಪ ಹೇಳಿದರು. ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್ ಸಿ.ಬಿ. ಮಿಂಚನಾಳ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಎರಡು ದಿನಗಳಲ್ಲಿ ಕೊಳವೆ ಬಾವಿ ಕೊರೆಯುವುದಾಗಿ ಹೇಳಿದರು.