ಮುದ್ದೇಬಿಹಾಳ: ಸರ್ಕಾರದ ನಿಯಮದಂತೆ, ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಸಂಜೆ 7 ಗಂಟೆಯಾದರೂ ಅವರೋಹಣ ಮಾಡದ ದೃಶ್ಯ ಕಂಡುಬಂತು. ದಲಿತ ಮುಖಂಡ ಬಸವರಾಜ ಶಿವಪೂರ, ಈ ವಿಷಯವನ್ನು ಮಾಧ್ಯಮದವರ ಗಮನಕ್ಕೆ ತಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಪ್ರಭಾರ ಇಓ ಜಿ.ಎಸ್. ಪಾಟೀಲ, ನಿತ್ಯ ರಾಷ್ಟ್ರಧ್ವಜದ ಆರೋಹಣ ಮತ್ತು ಅವರೋಹಣಕ್ಕಾಗಿ ಪವಾಡೆಪ್ಪ (ಗುತ್ತಿಗೆ ಕೆಲಸಗಾರ) ಎಂಬುವವರನ್ನು ನೇಮಿಸಲಾಗಿದೆ. ಅನಾರೋಗ್ಯದಿಂದಾಗಿ ಅವರಿಗೆ ಕಚೇರಿಯತ್ತ ಬರಲು ಸಾಧ್ಯವಾಗಿಲ್ಲ. ಕೂಡಲೇ ಧ್ವಜವನ್ನು ಇಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಯಾವುದೇ ಕೆಲಸಗಳು ನಿಯಮಿತವಾಗಿ ನಡೆಯುತ್ತಿಲ್ಲ. ನಾಲ್ಕು ವರ್ಷದಿಂದ ಇಲ್ಲಿ ಕಾಯಂ ಕಾರ್ಯ ನಿರ್ವಾಹಕ ಅಧಿಕಾರಿ ಇಲ್ಲ. ಪ್ರಭಾರಿಯಾಗಿ ಬರುವ ಅಧಿಕಾರಿಗಳಿಗೆ ಇಲ್ಲಿನ ಕೆಲಸಗಳ ಬಗ್ಗೆ ಸರಿಯಾಗಿ ಮಾಹಿತಿ ಇರುವುದಿಲ್ಲ. ಮೊದಲು ಇಲ್ಲಿಗೆ ಕಾಯಂ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸಮಾಜ ಸೇವಕ ಚೇತನ ಕೆಂದೂಳಿ ಹಾಗೂ ಇತರರು ಒತ್ತಾಯಿಸಿದರು.