ಗದಗ: ಜಿಲ್ಲೆಯಾಗಿ ಎರಡು ದಶಕ ಕಳೆ ದರೂ, ಜಿಲ್ಲಾ ಕೇಂದ್ರ ಗದುಗಿನ ಮುಖ್ಯ ವೃತ್ತಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣ ಆಗಿಲ್ಲ. ನಗರದೊಳಗಿನಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೂ ಬಸ್ ಶೆಲ್ಟರ್ ವ್ಯವಸ್ಥೆ ಇಲ್ಲ.
ಇದರಿಂದ ಹುಬ್ಬಳ್ಳಿ, ಕೊಪ್ಪಳ, ಹೊಸ ಪೇಟೆ, ಬದಾಮಿ, ಬಾಗಲಕೋಟೆ, ಬಳ್ಳಾರಿ ಮುಂತಾದ ಕಡೆ ಹೋಗುವ ಪ್ರಯಾಣಿ ಕರು ಪಾದಚಾರಿ ರಸ್ತೆಯ ಮೇಲೆಯೇ ನಿಂತು ಬಸ್ಸಿಗಾಗಿ ಕಾಯಬೇಕಿದೆ.
ಹುಬ್ಬಳ್ಳಿ ಕಡೆಗೆ ಹೋಗುವ ಪ್ರಯಾ ಣಿಕರು ನಗರದ ಭೀಷ್ಮ ಕೆರೆಗೆ ಹೊಂದಿ ಕೊಂಡಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರಿನ ವೃತ್ತದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಾರೆ. ಮುಳ ಗುಂದ ನಾಕಾದಲ್ಲೂ ಇದೇ ಪರಿಸ್ಥಿತಿ. ಮುಳಗುಂದ ನಾಕಾ ಸಿಗ್ನಲ್ ಸಮೀಪ ಬಸ್ ಶೆಲ್ಟರ್ ಇಲ್ಲದ ಕಾರಣ ಅಲ್ಲಿನ ಪೆಟ್ರೋಲ್ ಬಂಕ್ ಆವರಣವನ್ನೇ ಪ್ರಯಾ ಣಿಕರು ಅನಿವಾರ್ಯವಾಗಿ ಬಸ್ ಶೆಲ್ಟರ್ ಆಗಿ ಬಳಸುತ್ತಿದ್ದಾರೆ.
‘ಹಳೆಯ ಡಿ.ಸಿ ಕಚೇರಿ ಎದುರಿನ ವೃತ್ತದಲ್ಲಿ ಬಸ್ ಶೆಲ್ಟರ್ ಇಲ್ಲ. ಹೀಗಾಗಿ ನಾವು ಪಾದಚಾರಿ ಮಾರ್ಗದಲ್ಲೇ ನಿಲ್ಲುತ್ತೇವೆ. ಇಲ್ಲಿ ವಿಪರೀತ ಗಾಳಿ, ಗಾಳಿ ಬೀಸಿದಾಗ ಧೂಳು ಮುಖಕ್ಕೆ ಅಡರುತ್ತದೆ. ಮಳೆ ಬಂದರೆ ರಕ್ಷಣೆ ಪಡೆ ಯಲು ರಸ್ತೆಯ ಇನ್ನೊಂದು ಬದಿಯಲ್ಲಿ ಇರುವ ಮಳಿಗೆಗೆಳ ಕಡೆಗೆ ಓಡಬೇಕು. ಇನ್ನೊಂದೆಡೆ ಟಂಟಂಗಳ ಹಾವಳಿ. ರಸ್ತೆ ಮೇಲೆ ಎಲ್ಲಿ ಬೇಕೆಂದರಲ್ಲಿ ಆಟೊಗಳನ್ನು ನಿಲ್ಲಿಸಿರುತ್ತಾರೆ. ಸಮೀಪದಲ್ಲೇ ತ್ಯಾಜ್ಯ ಸಹ ಎಸೆಯಲಾಗುತ್ತದೆ’ ಎಂದು ವಿದ್ಯಾ ರ್ಥಿನಿ ಸುಮಾ ತಿಳಿಸಿದರು.
ನಗರದ ಹೊರಗಿರುವ ಹೊಸ ಬಸ್ ನಿಲ್ದಾಣ ಮೊದಲಿನಿಂದಲೂ ಪ್ರಯಾಣಿ ಕರಿಂದ ದೂರ ಉಳಿದಿದೆ. ನಗರದಿಂದ ಬೇರೆಡೆಗೆ ಪ್ರಯಾಣಿಸುವರು ಅಲ್ಲಿಗೆ ಹೋಗುವುದಿಲ್ಲ. ಬದಲಿಗೆ ರಸ್ತೆ ಪಕ್ಕ ದಲ್ಲೇ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಾರೆ. ನಗರದ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣದ ಎದುರು ಮಾಳಶೆಟ್ಟಿ ವೃತ್ತದಲ್ಲಿ ಸದ್ಯ ಚರಂಡಿ ಕಾಮಗಾರಿ ನಡೆಯುತ್ತಿದೆ.
ಹೀಗಾಗಿ, ಇಲ್ಲಿ ಸಂಚಾರ ದಟ್ಟಣೆ ಆಗುತ್ತಿದ್ದು, ಹೆಚ್ಚಿನ ಪ್ರಯಾಣಿಕರ ಸಮೀಪದ ರೋಟರಿ ವೃತ್ತಕ್ಕೆ ಬಂದು ರಸ್ತೆ ಪಕ್ಕದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಲ್ಲು ತ್ತಾರೆ. ಮಳೆ ಸುರಿದಾಗ ಈ ವೃತ್ತ ಕೆಸರು ಗದ್ದೆಯಾ ಗುತ್ತದೆ. ಇಲ್ಲಿಂದ ಇನ್ನೂರು ಮೀಟರ್ ದೂರದಲ್ಲಿರುವ ಗಾಂಧಿ ವೃತ್ತ ದಲ್ಲಿ ಬಾಗಲಕೋಟೆ, ರೋಣ, ಗಜೇಂದ್ರ ಗಡ ಮುಂತಾದೆಡೆ ಹೋಗುವ ಬಸ್ಸು ಗಳು ನಿಲ್ಲುತ್ತವೆ. ಇಲ್ಲೂ ಬಸ್ ಶೆಲ್ಟರ್ ಇಲ್ಲ. ಇದರಿಂದಾಗಿ ಪ್ರಯಾಣಿಕರ ಪರದಾಟ ಹೇಳುವಂತಿಲ್ಲ.
‘ಗದುಗಿನಿಂದ ನೂರಾರು ಸಂಖ್ಯೆಯ ಪ್ರಯಾಣಿಕರು ನಿತ್ಯ ಹುಬ್ಬಳ್ಳಿಗೆ ಪ್ರಯಾಣಿಸುತ್ತಾರೆ. ಖಾಸಗಿ ಟೆಂಪೋ ಟ್ರಾವಲರ್ ಮತ್ತು ಸರ್ಕಾರಿ ಬಸ್ಗಳ ಮಧ್ಯೆ ಪೈಪೋ ಟಿಯೇ ನಡೆಯುತ್ತದೆ. ಬೇರೆ ವಾಹನ ದವರೂ ರಸ್ತೆ ಪಕ್ಕದಲ್ಲಿ ವಾಹನ ನಿಲು ಗಡೆ ಮಾಡುತ್ತಾರೆ. ಈ ಕಿರಿಕಿರಿ ದಾಟಿ ಬಸ್ ಹತ್ತುವುದರೊಳಗೆ ಸಾಕುಸಾಕಾಗು ತ್ತದೆ’ ಎಂದು ಮುಳಗುಂದ ನಾಕಾದಲ್ಲಿ ಸರ್ಕಾರಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಬಸವರಾಜ ಎಂ. ಲಕ್ಕುಂಡಿ ಹೇಳಿದರು.
ಪ್ರಮುಖ ವೃತ್ತಗಳಲ್ಲಿ ಬಸ್ ಶೆಲ್ಟರ್ ಇಲ್ಲದಿರುವುದರಿಂದ ನಗರದೊಳಗೆ ವಾಹನ ದಟ್ಟಣೆ ಹೆಚ್ಚುತ್ತಿದೆ ಎನ್ನುತ್ತಾರೆ ಸಂಚಾರಿ ಪೊಲೀಸರು. ಖಾಸಗಿ ವಾಹನ ಗಳು, ಟಂಟಂ, ಆಟೊಗಳು ಸಿಗ್ನಲ್ನಲ್ಲೇ ಪ್ರಯಾಣಿಕರನ್ನು ಇಳಿಸುತ್ತವೆ. ಪ್ರಯಾಣಿ ಕರೂ ಇಲ್ಲೇ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಾರೆ.
ವಾಹನಗಳು ಮುಂದೆ ಸಾಗದೆ ಸಂಚಾರಕ್ಕೆ ಅಡ್ಡಿಯನ್ನುಂಟುಮಾಡುತ್ತವೆ. ಇದರಿಂದ ‘ಸಿಗ್ನಲ್ಗಿಂತ ನೂರಿನ್ನೂರು ಮೀಟರ್ ಹಿಂದೆ ಅಥವಾ ಸಿಗ್ನಲ್ ದಾಟಿದ ನಂತರ ಸ್ವಲ್ಪ ಅಂತರದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡುವಂತೆ ನಗರ ಆಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಪತ್ರಿಕೆಗೆ ಹೇಳಿದರು.
ಮೂರು ಕಡೆ ಬಸ್ ಶೆಲ್ಟರ್: ಪ್ರಯಾಣಿ ಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಮೂರು ಕಡೆ ಮೊದಲ ಹಂತ ದಲ್ಲಿ ಹೊಸ ಬಸ್ ಶೆಲ್ಟರ್ ನಿರ್ಮಿಸಲು ನಗರಾಡಳಿತ ಯೋಜನೆ ರೂಪಿಸಿದೆ.
ಭೀಷ್ಮಕೆರೆ ಹತ್ತಿರ, ಮುಳಗುಂದ ನಾಕಾ ಬಳಿ ಇರುವ ಉಪ ವಿಭಾಗೀಯ ಅಧಿ ಕಾರಿ ಕಚೇರಿಗೆ ಹೊಂದಿಕೊಂಡು ಮತ್ತು ಶಿವಾಜಿ ಉದ್ಯಾನದ ಸಮೀಪ ಈ ಶೆಲ್ಟರ್ ಗಳು ನಿರ್ಮಾಣಗೊಳ್ಳಲಿವೆ. ಇದರ ಸದ್ಬಳಕೆ ನೋಡಿಕೊಂಡು ಹಂತಹಂತ ವಾಗಿ ನಗರದಲ್ಲಿ ಇನ್ನಷ್ಟು ಶೆಲ್ಟರ್ಗಳು ನಿರ್ಮಾಣಗೊಳ್ಳಲಿವೆ ಎಂದು ನಗರಾಡ ಳಿತದ ಮೂಲಗಳು ಹೇಳಿವೆ.
* *
ನಗರದ ಮೂರು ಸ್ಥಳಗಳಲ್ಲಿ ಹೊಸ ಬಸ್ ಶೆಲ್ಟರ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಇದರಿಂದ ಸಂಚಾರ ದಟ್ಟಣೆ ಗಣನೀಯವಾಗಿ ತಗ್ಗಲಿದೆ
ಕೆ.ಸಂತೋಷಬಾಬು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.