ಜನವಾಡ: ಬೀದರ್ ತಾಲ್ಲೂಕಿನ ಚಿಕ್ಕಪೇಟೆಯ ಹಳೆಯ ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಭಾನುವಾರ ಮುಳುಗಿ ಮೃತಪಟ್ಟಿದ್ದಾರೆ. ಮಾಮನಕೇರಿ ಸಂಗಮೇಶ ರವಿ ಶಿವರಾಯನವರ್ (20) ಹಾಗೂ ಚಿಕ್ಕಪೇಟೆಯ ಜಾನ್ಸನ್ ಸಿದ್ದರಾಮ (35) ಮೃತಪಟ್ಟವರು.
ಭಾನುವಾರ ಮಧ್ಯಾಹ್ನ ಸಂಗಮೇಶ, ಅರುಣ ಬಸವಕಿರಣ ಹಾಗೂ ಪ್ರಭು ಎನ್ನುವವರು ಟ್ಯೂಬ್ ಕಟ್ಟಿಕೊಂಡು ಈಜಲು ಹೋಗಿದ್ದರು. ಸಂಗಮೇಶ ಬಾವಿಗೆ ಹಾರಿದ ತಕ್ಷಣ ಟ್ಯೂಬ್ ಕಳಚಿ ಮುಳುಗಿದ್ದಾರೆ.
ತಕ್ಷಣ ಅವರ ಜೊತೆಗಿದ್ದವರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ಸಂಗಮೇಶನ ಶವ ಮೇಲಕ್ಕೆ ತೆಗೆದಿದ್ದರು.
ಕಾರ್ಯಾಚರಣೆ ಮುಗಿದ ನಂತರ ಅಲ್ಲಿಯೇ ಇದ್ದ ಜಾನ್ಸ್ನ್ ಸಾಹಸ ಪ್ರದರ್ಶಿಸಲು ಬಾವಿಗೆ ಹಾರಿದ್ದಾರೆ. ಬಹಳ ಹೊತ್ತಿನ ವರೆಗೆ ಮೇಲೆ ಬರಲು ಸಾಧ್ಯವಾಗದೇ ಮೃತಪಟ್ಟಿದ್ದಾನೆ.
ಸಂಜೆ ಮತ್ತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದರು. ಸಿಪಿಐ ರಾಮಪ್ಪ ಸಾವಳಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.