ತುಮಕೂರು: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಹಲವಾರು ಕೆರೆ ಕಟ್ಟೆಗಳು ತುಂಬಿವೆ. ಕುಣಿಗಲ್ ತಾಲ್ಲೂಕಿನ ಗಿರಿಗೌಡನ ಪಾಳ್ಯದಲ್ಲಿ ಕೊಟ್ಟಿಗೆ ಕುಸಿದು ಎಮ್ಮೆಯೊಂದು ಅಸು ನೀಗಿದೆ.
ಕುಣಿಗಲ್, ಹುಲಿಯೂರು ದುರ್ಗ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು, ಶೆಟ್ಟಿಕೆರೆ, ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹಾಗೂ ಶಿರಾ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಕೆರೆಗಳಿಗೆ ನೀರು ಬಂದಿದೆ. ಸಣ್ಣಪುಟ್ಟ ಕೆರೆಗಳು, ಹಳ್ಳ ತೊರೆಗಳು ತುಂಬಿ ಹರಿದಿವೆ.
17 ವರ್ಷಗಳಿಂದ ಖಾಲಿಯಿದ್ದ ಕುಣಿಗಲ್ ತಾಲ್ಲೂಕಿನ ಯಲಿಯೂರು ಕೆರೆಗೆ ಒಂದೇ ದಿನ ಅರ್ಧ ಕೆರೆಯಷ್ಟು ನೀರು ಬಂದಿದೆ. ಶ್ರೀರಂಗ ಏತ ನೀರಾವರಿ ಕಾಮಗಾರಿಗಾಗಿ ಕೆರೆಯಲ್ಲಿ ಶೇಖರಿಸಿಟ್ಟಿದ್ದ ಪೈಪು, ಸಿಮೆಂಟ್ ಕೋಟಿಂಗ್ ಘಟಕ, ಕ್ರೇನ್, ಜೆಸಿಬಿ, ಮತ್ತು ಸಾವಿರಾರು ಮೂಟೆ ಸಿಮೆಂಟ್ ಚೀಲಗಳು ನೀರಿನಲ್ಲಿ ಮುಳುಗಿವೆ.