ವಾರ್ತಾ ಇಲಾಖೆಯ ಮುಖ್ಯ ಕಲಾವಿದರಾಗಿ ನಿವೃತ್ತರಾಗಿದ್ದ ಇವರು ಧಾರವಾಡದಲ್ಲಿ ನೆಲೆಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಲಲಿತಕಲಾ ಅಕಾಡೆಮಿ, ಕೇಂದ್ರ ಹಾಗೂ ರಾಜ್ಯ ಚಿತ್ರಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಸ್ತಬ್ಧ ಚಿತ್ರವನ್ನು, ಸತತ ಒಂಬತ್ತು ವರ್ಷ ಎಂ.ಬಿ.ಪಾಟೀಲ ಅವರೇ ವಿನ್ಯಾಸ ಮಾಡಿದ್ದರು. ಅವರು ವಿನ್ಯಾಸಗೊಳಿಸಿದ ಸ್ತಬ್ಧಚಿತ್ರಗಳಿಗೆ ಎರಡು ಸಲ ಪ್ರಥಮ ಹಾಗೂ ಮೂರು ಸಲ ದ್ವಿತೀಯ ಬಹುಮಾನ ಲಭಿಸಿದೆ. ಹಲವು ಪೌರಾಣಿಕ ಚಲನಚಿತ್ರಗಳಲ್ಲಿ ವಿನ್ಯಾಸಕಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.