ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಸರ್ವರೂ ಅನುಸರಿಸಬೇಕಾದ ಸಂವಿಧಾನವಿದೆ. ದೇಶದಲ್ಲಿ ಚುನಾಯಿತ ಸರ್ಕಾರಗಳಿವೆ. ದೇಶದ ಅಭಿವೃದ್ಧಿ, ಪ್ರಗತಿಗಾಗಿ ಮಾಡಲು ಬಹಳಷ್ಟು ಕೆಲಸಗಳಿವೆ. ಆದ್ದರಿಂದ ಹೊಸ ಧರ್ಮ ಸ್ಥಾಪನೆಗೆ ಅವಕಾಶವೇ ಇಲ್ಲ. ಇನ್ನು ಲಿಂಗಾಯತ ಸಂಪ್ರದಾಯ ಹಿಂದೂ ಧರ್ಮದ ಮುಂದುವರಿದ ಭಾಗವೇ ಆಗಿರುತ್ತದೆ. ಬಸವಣ್ಣನವರು, ಹಿಂದೂ ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿದ್ದರು ಆದರೆ ಅದನ್ನು ತ್ಯಜಿಸಿರಲಿಲ್ಲ. ಬದಲಿಗೆ ಹಿಂದು ಧರ್ಮದಲ್ಲಿದ್ದುಕೊಂಡೇ ಸಮಾನತೆ, ಏಕತೆ, ಮೌಢ್ಯ ನಿವಾರಣೆಗೆ ಶ್ರಮಿಸಿದರು. ಲಿಂಗಾಯತರು ಕಟ್ಟಿಕೊಳ್ಳುವ ಇಷ್ಟಲಿಂಗ, ಪೂಜಿಸುವ ಏಕದೇವ ಶಿವ (ಅದು ಲಿಂಗಾಕಾರ, ನಿರಾಕಾರ, ಓಂಕಾರ ಹೀಗೆ ಯಾವುದೇ ರೂಪದಲ್ಲಿರಲಿ) ಹಾಗೂ ಧರಿಸುವ ವಿಭೂತಿ ಎಲ್ಲವೂ ಹಿಂದೂ ಧರ್ಮದ ಸಂಕೇತಗಳೇ ಆಗಿವೆ.