ಹುಬ್ಬಳ್ಳಿ: ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಕೆರೆಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕ ಸಿ.ಎಸ್. ಶಿವಳ್ಳಿ ಸೋಮವಾರ ಬಾಗಿನ ಅರ್ಪಿಸಿದರು. ನಂತರ ಮಾತನಾಡಿದ ಅವರು, ಮಳೆಯಿಲ್ಲದೆ ಯರಗುಪ್ಪಿ ಕೆರೆಯು ಎಂಟು ವರ್ಷಗಳಿಂದ ಬರಿದಾಗಿತ್ತು. ಮೋಡಬಿತ್ತನೆಯಿಂದ ಗ್ರಾಮದ ಸುತ್ತ–ಮುತ್ತ ಉತ್ತಮ ಮಳೆಯಾಗಿದ್ದರಿಂದಾಗಿ ಕೆರೆ ಸಂಪೂರ್ಣ ತುಂಬಿದೆ ಎಂದು ಹೇಳಿದರು.
ಮಳೆಗಾಲ ಹಾಗೂ ಚಂಡಮಾರುತ ಬಂದರೂ ಕೂಡ ಯರಗುಪ್ಪಿ ಭಾಗದಲ್ಲಿ ಮಳೆ ಆಗಿರಲಿಲ್ಲ. ಆದರೆ, ಮೋಡ ಬಿತ್ತನೆ ನಡೆಸಿದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆ ತುಂಬಿದೆ. ಮೋಡಬಿತ್ತನೆ ಯಶಸ್ವಿಯಾಗಿರುವುದಕ್ಕೆ ಯರಗುಪ್ಪಿ ಕೆರೆಯೇ ಸಾಕ್ಷಿಯಾಗಿದೆ ಎಂದರು.