ಗೌರಿ ಲಂಕೇಶ್ ಹಂತಕರ ಸುಳಿವು ನೀಡುವವರಿಗೆ ಸರ್ಕಾರ ₹ 10 ಲಕ್ಷ ಬಹುಮಾನ ಘೋಷಿಸಿದೆ. ದೇವಮಾನವರು; ಪವಾಡ, ವಾಮಾಚಾರ ನಡೆಸುವವರು; ಭವಿಷ್ಯ, ಜನ್ಮಾಂತರಗಳ ಬಗ್ಗೆ ನುಡಿಯುವ ಡೋಂಗಿ ಮಹಾನುಭಾವರು ಸುಳ್ಳು ಹೇಳಿ ಮುಗ್ಧ ಜನರನ್ನು ವಂಚಿಸುವ ಬದಲು, ಸುಳಿವು ನೀಡಿ ₹ 10 ಲಕ್ಷ ಪಡೆಯಬಹುದಲ್ಲವೇ?
ಪ್ರತಿದಿನ ಬೆಳಗಾದರೆ ಮಾಧ್ಯಮಗಳಲ್ಲಿ ವೇಷಭೂಷಣಗಳಿಂದ ಅಲಂಕೃತರಾಗಿ ಕುಳಿತು ಭವಿಷ್ಯ ನುಡಿಯುವ, ಹಿಂದಿನ ಜನ್ಮದ ರಹಸ್ಯಗಳನ್ನು ಹೇಳಿಸುವ, ಅಂಜನ– ರಾಶಿ ಭವಿಷ್ಯಗಳಿಂದ ಲಕ್ಷಾಂತರ ಮುಗ್ಧ ಜನರನ್ನು ಮರುಳು ಮಾಡುವ ವಂಚಕ ಮಹಾನುಭಾವರೇ, ನಿಮಗೆ ಗೌರಿ ಲಂಕೇಶ್ ಹಂತಕರ ಸುಳಿವನ್ನು ತಿಳಿಯಲು ಸಾಧ್ಯವಾಗಲಿಲ್ಲ ಏಕೆ?
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು ಅಧಿಕ ಮುಖಬೆಲೆಯ ನೋಟು ರದ್ದು ಮಾಡಿದರು. ಅದರ ಸುಳಿವು ಮೊದಲೇ ನಿಮಗೆ ತಿಳಿಯಲಿಲ್ಲವೇಕೆ? ಈಗಲಾದರೂ ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ್, ಪಾನ್ಸರೆ ಹಂತಕರ ಸುಳಿವು ನೀಡಿ ನಿಮ್ಮ ತಾಕತ್ತು ತೋರಬಹುದಲ್ಲವೇ?
ಇಲ್ಲ ಎನ್ನುವುದಾದರೆ ನೀವು ಹೇಳುತ್ತಿರುವ ಭವಿಷ್ಯ, ಜನ್ಮಾಂತರ ರಹಸ್ಯಗಳು ಪೊಳ್ಳು ಕಂತೆ ಅಲ್ಲವೇ? ಮಾಧ್ಯಮದವರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲವೇಕೆ? ಟಿ.ವಿ.ಯಲ್ಲಿ ಕುಳಿತು ಪ್ರಶ್ನೆ ಕೇಳುವವರಿಗೆ ಹಂತಕರ ಸುಳಿವಿಗೆ ಸಂಬಂಧಿಸಿದ ಪ್ರಶ್ನೆಗಳು ಏಕೆ ಹೊಳೆಯುತ್ತಿಲ್ಲ?
ಕೊನೇಪಕ್ಷ ಹಂತಕರ ಮುಂದಿನ ಗುರಿ ಯಾರು ಎಂದಾದರೂ ತಿಳಿಸಿ. ಅವರಾದರೂ ಸುರಕ್ಷಿತರಾಗಿರುತ್ತಾರೆ. ನಿಮಗೆ ಕೃತಜ್ಞರಾಗಿರುತ್ತಾರೆ. ಇಲ್ಲವಾದರೆ ಮೌಢ್ಯದ ಬೀಜ ಬಿತ್ತುವುದನ್ನು ನಿಲ್ಲಿಸಿ. ಇಲ್ಲವೆಂದಾದರೆ ಒಂದಲ್ಲ ಒಂದು ದಿನ ರಾಮ ರಹೀಮ್ಗೆ ಬಂದ ಸ್ಥಿತಿಯೇ ನಿಮಗೂ ಬರುತ್ತದೆ.