ಸಿಂದಗಿ: ಮುಂಗಾರು ಮತ್ತು ಹಿಂಗಾರು ಬೆಳೆ ವಿಮೆ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಆಗ್ರಹಿಸಿ ತಾಲ್ಲೂಕಿನ ಹಂದಿಗನೂರ ಗ್ರಾಮದ ನೂರಾರು ರೈತರು ಕಾನೂನು ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರದ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ದಾನಪ್ಪಗೌಡ ಚನಗೊಂಡ ಮಾತನಾಡಿ, ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೆಳೆ ವಿಮೆ ಯೋಜನೆಯ ಲಾಭ ಸಿಗದೇ ರೈತರು ಕಂಗಾಲಾಗಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನು ಹಲವಾರು ಸಲ ಪಡೆದುಕೊಂಡಿದ್ದಾರೆ ವಿನಾ ರೈತರ ಬ್ಯಾಂಕ್ ಖಾತೆಗೆ ಈ ವರೆಗೂ ಹಣ ಜಮೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗ್ರಾಮದ 180 ರೈತರಿಗೆ 10 ದಿನಗಳ ಒಳಗಾಗಿ ವಿಮಾ ಪರಿಹಾರ ಹಣ ನೀಡದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುವುದು’ ಎಂದೂ ಎಚ್ಚರಿಸಿದರು. ನಂತರ, ಪ್ರತಿಭಟನಾಕಾರರು ಉಪ ತಹಶೀಲ್ದಾರ್ ಸೈಯದ್ ಹಾಫಿಜುದ್ದೀನ್ ಅವರಿಗೆ ಮನವಿ ಸಲ್ಲಿಸಿದರು.