ಯಾದಗಿರಿ: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೆ.13ರಂದು ಬೆಳಿಗ್ಗೆ 10.30ಕ್ಕೆ 2017–18ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೇಂಜರ್ ಘಟಕಗಳ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ಲೋಕಾಯುಕ್ತ ಡಿವೈಎಸ್ಪಿ ಡಿ.ಡಿ. ಪ್ರಭು, ಪ್ರಾಧ್ಯಾಪಕ ರಾಘವೇಂದ್ರ ಬಂಡಿಮನಿ, ಕಾಲೇಜು ಪ್ರಾಂಶುಪಾಲ ಪ್ರೊ.ಆರ್.ಪಿ. ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಾ.ಅನಸೂಯಾ ಜಿ. ಪಾಟೀಲ್ ತಿಳಿಸಿದ್ದಾರೆ.
ಶಹಾಪುರ: ಜೆಡಿಎಸ್ ಸಮಾವೇಶವನ್ನು ಸೆ15ರಂದು ಶಹಾಪುರದ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಬರಲಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ವಿಠಲ ವಗ್ಗಿ ತಿಳಿಸಿದ್ದಾರೆ.
ನಗರದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಮುಖಂಡರು ಸೋಮವಾರ ಪಾದಯಾತ್ರೆ ಮಾಡಿ ಅಂದಿನ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜೆಡಿಎಸ್ ನಡಿಗೆ ಜನರ ಕಡೆಗೆ ಎಂಬ ಘೋಷಣೆಯೊಂದಿಗೆ ನಾವು ಪಾದಯಾತ್ರೆ ನಡೆಸಿದ್ದೇವೆ ಎಂದು ವಿಠಲ ವಗ್ಗಿ ವಿವರಿಸಿದರು.
ಜೆಡಿಎಸ್ ಮುಖಂಡರಾದ ರಾಮಣ್ಣಗೌಡ ಮರಡ್ಡಿ, ಅಶೋಕ ಕರೆಗಾರ,ತಿರುಪತಿ ವಂದಗನೂರ,ಭೀಮಣ್ಣಗೌಡ ದೇಸಾಯಿ, ಶಿವನಗೌಡ ಆಲ್ದಾಳ, ಹಳ್ಳೆಪ್ಪಗೌಡ ಕೆಂಭಾವಿ, ಮಾನಶಪ್ಪ ಕರಡಕಲ್, ಆರ್.ಕೆ.ನಾಯಕ, ಅರುಣ ಹಳಿಸಗರ ಇದ್ದರು.