ಉಡುಪಿ: ಇದೇ 13 ಮತ್ತು 14ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವಕ್ಕೆ ಕೃಷ್ಣ ಮಠದಲ್ಲಿ ಭರದಿಂದ ಸಿದ್ಧತೆ ನಡೆ ದಿದೆ. ರಥೋತ್ಸವಕ್ಕೆ ರಥಬೀದಿ ಸಜ್ಜು ಗೊಂಡಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ.
ಬುಧವಾರ ಕೃಷ್ಣ ಮಠವನ್ನು ಬಗೆ ಬಗೆಯ ಹೂಗಳಿಂದ ಸಿಂಗರಿಸಲಾ ಗುತ್ತದೆ. ಉಪವಾಸ ಆಚರಿಸುವ ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಅಂದು ಮಧ್ಯರಾತ್ರಿ 12.34ಕ್ಕೆ ಶ್ರಿಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುವರು. ಮರು ದಿನ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಇದಕ್ಕಾಗಿ ಸಾವಿರಾರು ಸಿಹಿ ಉಂಡೆ, ಚಕ್ಕುಲಿ ತಯಾರಿಸಲಾಗಿದೆ. ಚಿಣ್ಣರ ಸಂತ ರ್ಪಣೆಯ 132 ಶಾಲೆಗಳ ಸುಮಾರು 16 ಸಾವಿರ ವಿದ್ಯಾರ್ಥಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.
ವಿಟ್ಲಪಿಂಡಿ ಉತ್ಸವವನ್ನು ಅದ್ಧೂರಿ ಯಾಗಿ ನಡೆಸಲು ತಯಾರಿ ನಡೆದಿದೆ. ರಥಬೀದಿಯಲ್ಲಿ ಅಲ್ಲಲ್ಲಿ ಕಮಾನು ನಿರ್ಮಿಸಿ ಮೊಸರು ಕುಡಿಕೆ ಕಟ್ಟಲಾಗಿದೆ. ರಥೋತ್ಸವ ಸಾಗಿ ಬರುವ ವೇಳೆ ಕುಡಿಕೆ ಒಡೆಯಲಾಗುತ್ತದೆ.
ಹುಲಿ ವೇಷ ಹಾಗೂ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ. ವಾದ್ಯ ತಂಡಗಳು ಸಹ ಭಾಗವಹಿಸಲಿವೆ. ವಿವಿಧ ವೇಷ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ.
ರಥೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲ ಎಂಟು ದ್ವಾರಗಳಲ್ಲಿಯೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸ ಲಾಗುತ್ತದೆ.