ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಯರಗನಹಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಾಮನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.12ರಂದು ಮೋಡ ಬಿತ್ತನೆ ನಡೆಸಲಾಯಿತು.
ಮೋಡಗಳ ಲಭ್ಯತೆ ಆಧಾರದ ಮೇಲೆ ಮೋಡ ಬಿತ್ತನೆ ಮಾಡಲಾಗಿದ್ದು, ಈ ವ್ಯಾಪ್ತಿಯಲ್ಲಿ ಎರಡು ಪ್ಲೈಯರ್ಗಳನ್ನು ಸಿಡಿಸಲಾಗಿದೆ. ಇದರಿಂದ ಉತ್ತಮ ಮಳೆಯ ಮುನ್ಸೂಚನೆ ಇದೆ. ಹುಬ್ಬಳ್ಳಿಯಿಂದ ಸಂಜೆ 4ಕ್ಕೆ ಕಾರ್ಯಾಚರಣೆ ಆರಂಭಿಸಿದ ಎರಡು ವಿಮಾನಗಳು 4.01ಕ್ಕೆ ಮೋಡಬಿತ್ತನೆ ನಡೆಸಿದವು.
ಮೋಡಬಿತ್ತನೆ ಕಾರ್ಯಾಚರಣೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸೆ.12ಕ್ಕೆ ಒಂಬತ್ತನೆ ದಿನಕ್ಕೆ ಕಾಲಿಟ್ಟಿದೆ. ದಾವಣಗೆರೆ ಜಿಲ್ಲೆ ಸೇರಿದಂತೆ ಚಿತ್ರದುರ್ಗ, ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೋಡಬಿತ್ತನೆ ನಡೆಸಲಾಯಿತು.