ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆತ್ತದೇಟಿನ ಮಹಿಮೆ ನಾನೂ ಅರಿತೆ

ಛಡಿ ಚಂಚಂ, ವಿದ್ಯೆ ಘಂಘಂ
Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೈಯಲ್ಲಿ ಬಡಿಗೆ ಇದೆ ಎಂದರೆ, ಓ ಇವರು ಶಿಕ್ಷಕರು ಎಂದು ಅಂದಾಜಿಸುವ ಕಾಲವೊಂದಿತ್ತು.  ನಾನು ಆಗ ಪ್ರಾಥಮಿಕ ಶಾಲಾ ವಿದ್ಯಾರ್ಥಿ. ನಮಗೊಬ್ಬರು ಮೇಷ್ಟ್ರು ಪರಗೊಂಡಪ್ಪ ಅಂತ. ಬಿಳಿ ಧೋತಿ, ನೆಹರು ಶರ್ಟ್‌ ಅವರ ಉಡುಪು. ಸರಳ ವ್ಯಕ್ತಿತ್ವ. ಆದರೆ ಕೋಪ ಬಂದರೆ ಮುಗೀತು. ಒಂದು ಭಾನುವಾರ ಮಧ್ಯಾಹ್ನ ಅವರು ವಿಶ್ರಾಂತಿ ಪಡೆಯುವ ಸಮಯ.

ಓಣಿಯ ಕೆಲವು ಮಕ್ಕಳು ಸೇರಿ ಅವರ ಮನೆ ಹತ್ತಿರ ಆಟ ಚೀರಾಟ ಮಾಡುತ್ತಾ ಗಲಾಟೆ ಮಾಡುತ್ತಿದ್ದರು. ಕೋಪಗೊಂಡ ಮೇಷ್ಟ್ರು ಎದ್ದು ಬಂದಾಗ ಹುಡುಗರೆಲ್ಲ ಅಲ್ಲಿಂದ ಪರಾರಿ. ಆ ಹುಡುಗರು ಯಾರ‍್ಯಾರೆಂಬುದು ಅವರಿಗೆ ತಿಳಿಯಲಿಲ್ಲ.

ಮರುದಿನ ಶಾಲಾ ಪ್ರಾರ್ಥನೆ ಸಮಯ ನಿನ್ನೆಯ ದಿನ ಗಲಾಟೆ ಮಾಡಿದ ಹುಡುಗರ ಪರೇಡ್‌ಗೆ ಆದೇಶ ನೀಡಿದರು. ಇದನ್ನೆಲ್ಲ ಅರಿತಿದ್ದ ಆ ಗಲಾಟೆ ಹುಡುಗರು ಮಾತ್ರ ನಾಪತ್ತೆ. ಅವರ ದೃಷ್ಟಿ ಬಿದ್ದಿದ್ದು ನನ್ನ ಮೇಲೆ. ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ.

ನಿರಪರಾಧಿಯಾದ ನನಗೆ ಈ ಪರಿ ಶಿಕ್ಷೆ ಆಗುತ್ತೆ ಅಂತ. ನನ್ನನ್ನು ಎಳೆದುಕೊಂಡು ಹೋಗಿ ಕಾಲು ಹಿಡಿದು ತಲೆ ಕೆಳಗೆ ಮಾಡಿ ಹಿಡಿದು ಬೆನ್ನ ಮೇಲೆ ಛಡಿ ಏಟಿನ ಚಿತ್ತಾರ ಬಿಡಿಸಿಯೇಬಿಟ್ಟರು. ಮೈಚಳಿ ಬಿಟ್ಟು ಬಡಿದು ಬಿಸಾಕಿದರು. ಇಂದಿಗೂ ಅವರನ್ನು ಕಂಡೊಡನೆ ಆ ಘಟನೆ ಕಣ್ಣ ಮುಂದೆ ಕುಣಿಯುತ್ತದೆ.

ಇನ್ನೊಂದು ಘಟನೆ. ಗಣಿತ ವಿಷಯವೋ ನಮಗೆ ಪರದೇಶಿ ಪರಿಚಿತ. ಗಣಿತ ಮೇಷ್ಟ್ರು ಉಗ್ರ ನರಸಿಂಹ. ಹೀಗೆ ಒಂದು ದಿನ ಗಣಿತ ಲೆಕ್ಕ ಬಿಡಿಸಲು ಹೇಳಿದಾಗ ಮೊದಲ ಬೆಂಚಿನ ವಿದ್ಯಾರ್ಥಿಯಾದ ನಾನು ಹೇಗೋ ಒದ್ದಾಡಿ ಗುದ್ದಾಡಿ ಲೆಕ್ಕ ಬಿಡಿಸಿದೆ. ನನ್ನ ದುರದೃಷ್ಟಕ್ಕೆ ಮೇಷ್ಟ್ರು ನನ್ನ ನೋಟ್‍ಬುಕ್ ಕೈಗೆತ್ತಿಕೊಂಡ ತಕ್ಷಣ ಪೇಜು ಹರಿದು ಅವರ ಕೈ ಸೇರಿತು.

ಅವರ ಕಣ್ಣು ಕೆಂಪಾದವು, ‘ಏನೋ ಇದೇನು ಎಣ್ಣೆ ಚೀಟಿಯಾ?’ ಎಂದು ಹೇಳಿದ್ದೆ ತಡ, ದಪ್ಪನೆಯ ಕೋಲಿನಿಂದ ತಲೆ ಮೇಲೆ ಟಣ್ ಅಂತ ಬಿದ್ದ ಏಟಿಗೆ ಕಣ್ಣು ಕತ್ತಲಾಯಿತು. ಮೆದುಳಿನಿಂದ ಗಣಿತ ಓಡಿ ಹೋಯಿತು, ಮೊದಲ ಬೆಂಚಿನ ಸಹವಾಸ ಬಿಟ್ಟೆ, ಇದೆಲ್ಲದರ ಪರಿಣಾಮ 10ನೇ ತರಗತಿಯಲ್ಲಿ ಗಣಿತ ಬುಡಮೇಲಾಯಿತು. ಆ ಒಂದು ಅಪಜಯದಿಂದ ನಾನು ಅನುಭವಿಸಿದ ನೋವು, ಅವಮಾನ ನನ್ನಲ್ಲಿ ಛಲ ತುಂಬಿತು. ಮುಂದೆ ನಾನು ಚೆನ್ನಾಗಿ ಓದಿ ಶಿಕ್ಷಕನಾದೆ. ಅದೊಂದು ಘಟನೆ ನನ್ನ ಜೀವನಕ್ಕೆ ತಿರುವು ಕೊಟ್ಟಿತ್ತು.

ಕೆಲವು ಬಾರಿ ನಮ್ಮನ್ನು ಗೋಡೆಗೆ ನೇತು ಹಾಕಿ ಕೆಳಗೆ ಮುಳ್ಳು ಕಂಟಿ ಇಟ್ಟು ಶಿಕ್ಷಿಸಿದ್ದೂ ಉಂಟು. ಕೈ ಬಿಟ್ಟರೆ ಕೆಳಗೆ ಮುಳ್ಳು, ಕೈ ಹಿಡಿದುಕೊಂಡರೆ ನೋವು, ಅಬ್ಬಾ! ಭಯಂಕರ. 10 ವರ್ಷಗಳಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ನಾನು ಈಗ ಸಾಮಾನ್ಯವಾಗಿ ಶಿಕ್ಷಕರಿಗೆ ಕೋಪ ಏಕೆ ಬರುತ್ತದೆ ಎಂಬ ಅಂಶ ಮನದಟ್ಟು ಮಾಡಿಕೊಂಡಿದ್ದೇನೆ. ಶಿಕ್ಷಕರ ಬೆತ್ತದೇಟಿನ ಮಹಿಮೆಯನ್ನು ನಾನೂ ಅರಿತುಕೊಂಡಿದ್ದೇನೆ.
–ಗಂಗಾಧರ ಗು ಹಿರೇಮಠ ಕೂಡಲಸಂಗಮ

*
ಬರ್ಲಿನ ಭಯದಿಂದ ಪಾಸಾದೆ
ಅದೇ ತಾನೆ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಾಲೆಗೆ ಹಾಜರಾದೆ. ಉಂಡಾಡಿ ಗುಂಡನಂತಿದ್ದ ನಾನು, ಶಾಲೆಗೆ ಹೋಗೋಣ, ಮನೆಗೆ ಬರೋಣ ಅಷ್ಟೇ. ಗೊತ್ತಿರೋ ಈ ಎರಡು ವಿದ್ಯೆಗಳು ಬಹಳ ದಿನ ಉಳಿದು ಬೆಳೆಯಲಿಲ್ಲ. ಕಾರಣ ಹೈಸ್ಕೂಲಲ್ಲಿ ನೀಡುತ್ತಿದ್ದ ಛಡೀಯೇಟುಗಳು.

ಅಂದು ಶನಿವಾರ ಸಾಮೂಹಿಕ ಕವಾಯತು ತೆಗೆದುಕೊಂಡಿದ್ದ ದೈಹಿಕ ಶಿಕ್ಷಕರು ಅಶಿಸ್ತಿನ ನನ್ನ ವರ್ತನೆಗೆ ವಿಷಲ್ ಹಾಕಿಕೊಂಡ ವೈರಿಂದ ಕೊಟ್ಟ ಏಟುಗಳು ಹೇಗಿದ್ದವೆಂದರೆ ಮರಳಿ ಓಡಿಹೋಗುವಷ್ಟು. ಜೋರಾಗಿ ‘ಎವ್ವಾ’ ಎಂದು ಕೂಗಿದೆ. ಮತ್ತೆರಡು ಬಿದ್ದವು. ಮತ್ತೆ ಕೂಗಿದರೆ ಮತ್ತೆ ಮತ್ತೆ ಬೀಳುತ್ತವೆಂದು ಖಚಿತವಾಯಿತು.

ನೋವನ್ನು ಒತ್ತಿ ಹಿಡಿದುಕೊಂಡು ಅವರ ಕಟ್ಟಾಜ್ಞೆಯನ್ನು ಪಾಲಿಸಿದೆ. ಮನೆಗೆ ಹೋದಾಗಲೂ ಕೊಟ್ಟ ಏಟುಗಳು ಆಗಾಗ ನೆನಪಿಸುವಂತಿತ್ತು. ಈ ವಿಷಯ ಮನೆಯಲ್ಲಿ ಹೇಳುವಂತಿರಲಿಲ್ಲ. ಹೇಳಿದರೆ ಅವ್ವನಿಂದ ಬೈಗುಳದ ಉಡುಗೊರೆ. ಏನೂ ಆಗಿಯೇ ಇಲ್ಲವೆಂಬಂತೆ ಇರಬೇಕಿತ್ತು.

ಹೀಗೆ ಆರಂಭವಾದ ಪ್ರೌಢ ಶಿಕ್ಷಣದ ಶಿಕ್ಷೆ ಪ್ರತಿ ವಿಷಯದ ಶಿಕ್ಷಕರಿಂದಲೂ ಸಿಗುತ್ತಿದ್ದವು. ಒಬ್ಬೊಬ್ಬರ ಕೈ ರುಚಿ ಒಂದೊಂದು ರೀತಿ. ಆದರೆ ಎಲ್ಲವೂ ಬಾಡದೂಟಗಳೇ. ಅರಗಿಸಿಕೊಳ್ಳಲು ವಾರಗಳೇ ಬೇಕಾಗಿದ್ದವು. ಒಬ್ಬೊಬ್ಬರಿಗೆ ಒಂದೊಂದು ಕೋಲು, ಹಸಿ ಬರ್ಲು ಸಾಕಾಗುತ್ತಿರಲಿಲ್ಲ. ಅವು ಮುರಿಯುವವರೆಗೂ ಶಿಕ್ಷೆ ನಿಲ್ಲುತ್ತಿರಲೇ ಇಲ್ಲ. ಶಿಕ್ಷೆಯ ಪ್ರಮಾಣ ಏರುತ್ತಿದ್ದಂತೆ ನನ್ನ ವಿದ್ಯಾಭ್ಯಾಸವು ಕೊಂಚ ಕೊಂಚ ಏರಿಕೆಯಾಗುತ್ತಾ ಸಾಗತೊಡಗಿತು.

ಫೇಲಾಗುವ ವಿದ್ಯಾರ್ಥಿಯಾಗಿದ್ದ ನಾನು ಹತ್ತನೇ ತರಗತಿ ಪಾಸಾದೆ ಎಂದರೆ ಅದು ಶಿಕ್ಷೆಯ ಭಯದಿಂದಲೇ. ಈಗ ನಾನೂ ಶಿಕ್ಷಕನಾಗಿದ್ದೇನೆ. ಇದಕ್ಕೆಲ್ಲ ಕಾರಣ ನಾನು ಪಡೆದ ಛಡೀಯೇಟಲ್ಲದೆ ಇನ್ನೇನಲ್ಲ.
– ವೆಂಕಟೇಶ ಬಂಡೇರ,ಹಾವೇರಿ

*
ಪೆಟ್ಟುಗಳು ತಿದ್ದಿದ ಬದುಕು
ನನ್ನೂರು ತೂಬಿನಕೆರೆಯಿಂದ ಸುಮಾರು ನಾಲ್ಕೈದು ಕಿ.ಮೀ.ಗಳ ದೂರದಲ್ಲಿರುವ ಮಾಯಣ್ಣನ ಕೊಪ್ಪಲು. ಮಳೆ ಬಿಸಿಲೆನ್ನದೆ ಕಾಲುದಾರಿಯಲ್ಲಿ ನಡೆದು ಹೋಗಿ ಗುಡಿಸಲಿನ ತರಗತಿಗಳಲ್ಲಿ ಕಲಿತ ಕಠಿಣ ಶಿಕ್ಷಣ ನನ್ನ ಬದುಕನ್ನ ಕಟ್ಟಿಕೊಳ್ಳಲು ಪೂರಕ ಹಾಗೂ ಪ್ರೇರಕವಾಯ್ತು.

ನನ್ನ ಗಲಾಟೆ, ತಲೆಹರಟೆ ಹಾಗೂ ಓದು ಬರಹದೆಡೆಗಿನ ತಾತ್ಸಾರದಿಂದ ನನಗೆ ಆಗಾಗ ಬೆತ್ತದ ಹಾಗೂ ಮಾತಿನ ಪೆಟ್ಟನ್ನು ನೀಡಿ ತಿದ್ದಿರುವ ಗುರುವೃಂದ ಹೃದಯಾಂತರಾಳದಲ್ಲಿ ಇಂದಿಗೂ ದೊಡ್ಡ ಸ್ಥಾನ ಪಡೆದಿದೆ.

ಲೆಕ್ಕದ ತಪ್ಪಿನಿಂದಾಗಿ ಸಿಟ್ಟಿನಿಂದ ಕೊಟ್ಟ ಭಾರೀ ಪೆಟ್ಟಿನಿಂದ ತಲೆಯಿಂದ ಚಿಮ್ಮಿದ ರಕ್ತವನ್ನು ತಡೆಯಲು ಟೇಬಲ್‌ ಮೇಲೆ ಮಲಗಿಸಿ ಸೀಮೆಸುಣ್ಣದ ಪುಡಿ ಮೆತ್ತಿ ಸಂತೈಸಿದ ಗಣಿತದ ಮೇಷ್ಟ್ರ ಕಲಿಕಾ ಮತ್ತು ಸೇವಾ ಗುಣವನ್ನು ನಾನಿನ್ನೂ ಮರೆತಿಲ್ಲ.

ಅಂಗೈ ಮಡಚಿ ಮುಂಗೈ ಮೇಲ್ಭಾಗದ ಬೆರಳುಗಳಿಗೆ ಬಲವಾಗಿ ಬಡಿಯುತ್ತಿದ್ದ ವಿಜ್ಞಾನದ ಗುರುಗಳು, ಬೆತ್ತದ ಪೆಟ್ಟಿಗಿಂತ ಮಾತಿನ ಪೆಟ್ಟಿನಿಂದಲೇ ಚುರುಕು ಮುಟ್ಟಿಸಿ ತಿದ್ದಿದ ಕನ್ನಡ ಮತ್ತು ಸಮಾಜ ಗುರುಗಳು, ಎನ್‌.ಸಿ.ಸಿ. ಪಥ ಸಂಚಲನದಲ್ಲಿ ತಪ್ಪಾದಾಗ ಅಟ್ಟಾಡಿಸಿ ಒಡೆಯುತ್ತಿದ್ದ ಪಾಲ್‌ ಮಾಸ್ಟರ್‌ ಇವರೆಲ್ಲರೂ ನನ್ನ ಭವಿಷ್ಯ ರೂಪಿಸಿದ ರೂವಾರಿಗಳೆಂದರೆ ಉತ್ಪ್ರೇಕ್ಷೆಯಾಗಲಾರದು.

ಬೆತ್ತದ ಹಾಗೂ ಮಾತಿನ ಪೆಟ್ಟನ್ನು ನೀಡಿ ಸನ್ಮಾರ್ಗ ತೋರಿದ ಗುರುಗಳು ಒಂದೆಡೆಯಾದರೆ, ಮನೆಯಲ್ಲಿ ಆಗಾಗ ಪೊರಕೆ ಏಟನ್ನು ಕೊಟ್ಟು ತಿದ್ದಿದ ನನ್ನವ್ವ ನಿಂಗಮ್ಮ ನನ್ನ ಪಾಲಿನ ಆದರ್ಶ ಗುರು.
–ತೂಬಿನಕೆರೆ ಲಿಂಗರಾಜು, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT