ಬಸವಾದಿ ಶಿವಶರಣರ ತತ್ವಾದರ್ಶಗಳಾದ ‘ಜಾತಿ ಭೇದಗಳ ಹಂಗಿಲ್ಲದ, ಪರಸ್ಪರ ವಿವಾಹಾದಿ ಕೊಡಕೊಳ್ಳುವಿಕೆಯ ಮೂಲಕ ಸಮಾನತೆಯನ್ನು ಸಾಧಿಸುವ, ಕಳಲೊಲ್ಲದ, ಕೊಲಲೊಲ್ಲದ, ಹುಸಿಯ ನುಡಿಯಲೊಲ್ಲದ, ಕೀಳರಿಮೆ ಅಗ್ಗಳಿಕೆಗಳಿಲ್ಲದ, ಪರಸತಿಯರನೊಲ್ಲೆನೆಂಬ, ಪರದ್ರವ್ಯವನೊಲ್ಲೆನೆಂಬ, ಹೋಮ, ಹವನ, ಪೂಜೆ, ದೇವಸ್ಥಾನಗಳನೊಲ್ಲದ, ಏಕ ದೇವಾರಾಧನೆಯ, ಪರಶಿವನ ಲಿಂಗರೂಪವನ್ನು ಅಂಗೈಯಲ್ಲಿಟ್ಟು ಪೂಜಿಸುವ, ದೇಹವೇ ದೇವಾಲಯವೆನ್ನುವ, ತನ್ಮೂಲಕ ಜಾತ್ರೆ, ರಥೋತ್ಸವ, ಕಾರ್ಣಿಕಗಳನ್ನೂ ಆಚರಿಸದೆ ಕಾಯಕವೇ ಕೈಲಾಸವೆನ್ನುವ’ ಒಂದು ಬೃಹತ್ ಸಮುದಾಯ ಈಗ ಭಾರತಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆ.