ಕೊಳ್ಳೇಗಾಲ: ತಾಲ್ಲೂಕಿನ ಜಕ್ಕಳ್ಳಿ ಗ್ರಾಮದ ಬಳಿ ಭರ್ತಿಯಾದ ಚೆಕ್ಡ್ಯಾಂಗೆ ಶಾಸಕ ಜಯಣ್ಣ ಬುಧವಾರ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು, ಅಂತರ್ಜಲ ಹೆಚ್ಚಿಸುವಲ್ಲಿ ಚೆಕ್ಡ್ಯಾಂಗಳ ಪಾತ್ರ ಮಹತ್ವದ್ದಾಗಿದೆ. ರೈತರು ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರನ್ನು ವ್ಯರ್ಥ ಮಾಡದೆ ಸಮರ್ಪಕವಾಗಿ ಬಳಸಿಕೊಳ್ಳಬೇಕು.
ಡ್ಯಾಂಗೆ ನೀರು ಹರಿದು ಬರುವ ದಾರಿಗಳನ್ನು ಒತ್ತುವರಿ ಮಾಡಬಾರದು ಎಂದು ತಿಳಿಸಿದರು. ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಡ್ಯಾಂಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಸುಬ್ರಹ್ಮಣ್ಯ, ರಾಮಕೃಷ್ಣ, ಮಾಜಿ ಅಧ್ಯಕ್ಷ ರಾಜು, ಪಿಡಿಒ ಶಿವಪ್ರಕಾಶ್, ಗುತ್ತಿಗೆದಾರ ಭಾನುಪ್ರಕಾಶ್, ಎಂಜಿನಿಯರ್ ಸುರೇಶ್ ಹಾಜರಿದ್ದರು.