ದಾವಣಗೆರೆ: ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಆರಂಭದಲ್ಲೇ ಸಮಸ್ಯೆ ಬಗೆಹರಿಸದಿದ್ದರೆ ನಗರವು ‘ಗಾರ್ಬೇಜ್ ಸಿಟಿ’ ಆಗುವುದರಲ್ಲಿ ಅನುಮಾನವಿಲ್ಲ.
ಕಸದ ಸಮಸ್ಯೆಗೆ ಪರಿಹಾರ ಸೂಚಿಸುವುದರ ಜೊತೆಗೆ ಅದಕ್ಕೆ ಕಾರಣವನ್ನೂ ತಿಳಿಯಬೇಕು. ನಗರದ ಬಡಾವಣೆಗಳಾದ ವೆಂಕಭೋವಿ ಕಾಲೊನಿ, ಆಜಾದ್ ನಗರ, ಬಾಷಾ ನಗರ. ಕೊರಚರಹಟ್ಟಿ, ದೇವರಾಜ್ ಕ್ವಾರ್ಟರ್ಸ್. ಎ.ಕೆ. ಕಾಲೊನಿಯಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ.
ಮೊದಲಿಗೆ ಕಸದ ಗಾಡಿ ಬರುತ್ತಿತ್ತು. ಈಗ ಅದರ ಸುಳಿವಿಲ್ಲ. ಮನೆಗಳ ಕಸವು ರಸ್ತೆ, ಚರಂಡಿ ಸೇರುತ್ತದೆ. ಈಗ ಇರುವ ಕಸದ ತೊಟ್ಟಿಗಳು ತುಂಬಿ ಹಂದಿಗಳು, ಬೀಡಾಡಿ ದನಗಳು ತ್ಯಾಜ್ಯವನ್ನು ಎಳೆದು ತಂದು ಹೊರಹಾಕುತ್ತವೆ.
ಇದರಿಂದ ಸಾರ್ವಜನಿಕರಿಗೆ ಓಡಾಡಲು ಕಿರಿಕಿರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಸಮರ್ಪಕವಾದ ಕಸದ ತೊಟ್ಟಿಗಳನ್ನು ಮಹಾನಗರ ಪಾಲಿಕೆಯವರು ಇರಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು.