ರಾಯಚೂರು: ಸಮಾಜ ಸೇವೆಗೆ ತಮ್ಮನ್ನೆ ಅರ್ಪಣೆ ಮಾಡಿಕೊಂಡಿರುವ ಸ್ವಾಮೀಜಿಗಳ ಬಗ್ಗೆ ಯಾವುದೇ ಆಪಾದನೆ ಮಾಡುವುದು ಸರಿಯಲ್ಲ. ತುಮಕೂರಿನ ಸಿದ್ಧಗಂಗಾ ಶ್ರೀಗಳ ಪಾದಕ್ಕೆ ಬಿದ್ದು ಸಚಿವ ಎಂ.ಬಿ.ಪಾಟೀಲ ಕ್ಷಮೆಯಾಚಿಸಬೇಕು ಎಂದು ಬಸವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಿವಬಸಪ್ಪ ಮಾಲಿಪಾಟೀಲ್ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾಗಿ ವೀರಶೈವ, ಲಿಂಗಾಯತ ಧರ್ಮದ ಬಗ್ಗೆ ಚರ್ಚಿಸಿದ ಸಂದರ್ಭದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂಬ ವಿಚಾರಕ್ಕೆ ಮಾನ್ಯತೆ ದೊರೆತಿದೆ ಎಂದು ಉನ್ಮಾದತೆಯಲ್ಲಿ ಹೇಳಿಕೆ ನೀಡಿ ಸಮುದಾಯವನ್ನು ದಿಕ್ಕು ತಪ್ಪಿಸುವ ಹುನ್ನಾರಕ್ಕೆ ಸಚಿವರು ಕಾರಣರಾಗಿದ್ದಾರೆ. ಈ ಭಕ್ತರಲ್ಲಿ ಮೂಡಿರುವ ದ್ವಂದ್ವತೆ ಈಗಾಗಲೇ ಮಠದಿಂದ ಪ್ರಕರಣೆ ನೀಡಿ ತೆರೆ ಎಳೆಯಲಾಗಿದೆ ಎಂದರು.
ಒಡೆಯುವ ದುರುದ್ದೇಶ ಸಚಿವರಲ್ಲಿದೆ. ರಾಜಕೀಯಕ್ಕಾಗಿ ಈ ರೀತಿ ಹೇಳಿಕೆ ನೀಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸಚಿವ ಸ್ಥಾನದಿಂದ ಎಂ.ಬಿ.ಪಾಟೀಲ ಅವರನ್ನು ತೆಗೆದುಹಾಕಬೇಕು ಎಂದು ಹೇಳಿದರು. ವೇದಿಕೆ ಸಂಚಾಲಕರಾದ ಮಹಾದೇವಪ್ಪ ನಾಡಗೌಡ, ಶರಣಬಸವ, ಪರ್ವತರೆಡ್ಡಿ, ಶೇಖರಪ್ಪ ಪಾಟೀಲ್ ಇದ್ದರು.