ತುಮಕೂರು: ‘ವಿವಾದವೆಲ್ಲ ಅಂತ್ಯವಾಗಿದೆ. ನಮ್ಮ ಪಾಲಿನ ದೇವರಾದ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೆ. ಪಡೆದಿದ್ದೇನೆ’ ಎಂದು ಗುರುವಾರ ರಾತ್ರಿ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾಗಿ ಗೌಪ್ಯ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಯಾವ ಪ್ರಶ್ನೆಗಳಿಗೂ ಅವರು ಉತ್ತರಿಸಲಿಲ್ಲ. ಬದಲಿಗೆ ‘ವಿವಾದವೆಲ್ಲ ಅಂತ್ಯವಾಗಿದೆ’ ಎಂದಷ್ಟೇ ಹೇಳಿ ತಮ್ಮ ಖಾಸಗಿ ಕಾರಿನಲ್ಲಿ ಹೊರಟರು. ಸಚಿವರ ಜತೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಇದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದಗಂಗಾ ಮಠದ ಅಧ್ಯಕ್ಷರೂ, ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ, ‘ಕಳೆದ ಎರಡು ಮೂರು ದಿನಗಳಿಂದ ನಡೆದ ಚಟುವಟಿಕೆಗಳಿಂದ ಸಚಿವ ಪಾಟೀಲ ಮಾನಸಿಕವಾಗಿ ನೊಂದಿದ್ದರು. ಹಿರಿಯ ಶ್ರೀಗಳ ದರ್ಶನ ಪಡೆದು ಈಗ ಸಂತೋಷವಾಗಿ ಮರಳಿದ್ದಾರೆ’ ಎಂದರು.
ಸಚಿವರು ಸ್ವಾಮೀಜಿ ಅವರ ಕ್ಷಮೆ ಕೇಳಿದರೇ ಎಂಬ ಪ್ರಶ್ನೆಗೆ ‘ಕ್ಷಮೆ ಎನ್ನುವುದೇನು ಇಲ್ಲ. ಸ್ವಾಮೀಜಿ ದರ್ಶನ ಪಡೆದುಕೊಂಡು ಹೋಗುವುದೇ ಅವರಿಗೆ ಮಾನಸಿಕವಾಗಿ ನೆಮ್ಮದಿ ಅಲ್ಲವೇ’ ಎಂದರು.
‘ಎಲ್ಲ ವಿವಾದಗಳು ಬಗೆಹರಿದಿವೆ. ಸಚಿವರೇನು ಅಂತಹ ಗುರುದ್ರೋಹ ಮಾಡಿಲ್ಲ. ಅವರಿಗೆ ಯಾವಾಗಲೂ ಸ್ವಾಮೀಜಿ ಅವರ ಮೇಲೆ ಭಕ್ತಿ ಇದ್ದೇ ಇದೆ’ ಎಂದರು.
’ಸಮಾಜದಲ್ಲಿ ಶಾಂತಿ ನೆಲೆಸಬೇಕು ಎನ್ನುವುದೇ ಎಲ್ಲರ ಉದ್ದೇಶ. ಹೀಗಾಗಿ ಎಲ್ಲರೂ ಕುಳಿತು ಚರ್ಚಿಸಿ ಸಮುದಾಯದ ಬಗ್ಗೆ ಶಾಂತಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.