ಹರಪನಹಳ್ಳಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಕುಣೆಮಾದಿಹಳ್ಳಿ ಗ್ರಾಮದ ಹತ್ತು ಮನೆಗಳು ಕುಸಿದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಹತ್ತು ಮನೆಗಳ ಪೈಕಿ ಐದು ಸಂಪೂರ್ಣವಾಗಿ ಕುಸಿದಿದ್ದು, ವಾಸಮಾಡಲು ಸಾಧ್ಯವಿಲ್ಲ.
ಉಳಿದ ಐದು ಮನೆಗಳು ಭಾಗಶಃ ಕುಸಿದಿವೆ. ಸಂಪೂರ್ಣವಾಗಿ ಕುಸಿದ ಐದು ಮನೆಗಳಲ್ಲಿದ್ದ ಟಿವಿ, ರೆಫ್ರಿಜಿರೇಟರ್ ಹಾಗೂ ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಅಡುಗೆ ಸಾಮಗ್ರಿಗಳು ಸಂಪೂರ್ಣವಾಗಿ ಹಾಳಾಗಿವೆ. ಈ ಐದು ಮನೆಗಳಿಂದ ಐದು ಮನೆಗಳಿಂದ ಒಟ್ಟು ₹ 15 ಲಕ್ಷಕ್ಕೂ ಹೆಚ್ಚು ಹಾನಿಯಾಗಿವೆ ಎಂದು ಅಂದಾಜು ಮಾಡಲಾಗಿದೆ. ಉಳಿದ ಐದು ಮನೆಗಳ ಗೋಡೆಗಳು ಕುಸಿದಿದ್ದರಿಂದ ₹ 2.5 ಲಕ್ಷ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಂದಾಜು ಮಾಡಿದೆ.
ಪಿಂಜಾರ್ ಖಾಸೀಂ ಸಾಬ್, ಷರೀಫ್ಸಾಬ್, ಜಿ.ಕೊಟ್ರಪ್ಪ, ಎಚ್.ನಾಗಮ್ಮ, ಜಿ.ಕೊಟ್ರಪ್ಪ, ಹನುಮಂತಪ್ಪ, ಕೊಟ್ರಪ್ಪ, ವೀರಣ್ಣ, ಹುಚ್ಚಪ್ಪ, ಹೊನ್ನೂರಲಿ ಸಾಬ್ ಅವರ ಮನೆಗಳಿಗೆ ಹಾನಿಯಾಗಿವೆ. ಗ್ರಾಮ ಲೆಕ್ಕಾಧಿಕಾರಿ ಆರ್.ಸಂತೋಷ್, ಪಿಡಿಒ ಮತ್ತಿಹಳ್ಳಿ ರವಿ ಅವರು ತಹಶೀಲ್ದಾರ್ಗೆ ವರದಿ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾರ್ಯ ಮತ್ತು ಒಳ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮನೆಗಳ ಗೋಡೆಗಳಿಗೆ ಹೊಂದಿಕೊಂಡು ಗುಂಡಿಗಳನ್ನು ತೆರೆಯಲಾಗಿತ್ತು. ಮಳೆ ಸುರಿದಿದ್ದರಿಂದ ಗೋಡೆಗಳು ಕುಸಿದಿವೆ ಎಂದು ಎಂದು ಗ್ರಾಮಸ್ಥರು ದೂರಿದ್ದಾರೆ. ‘ಮನೆಗಳ ಹಾನಿ ಕುರಿತು ವರದಿ ಲಭಿಸಿದೆ. ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು’ ಎಂದು ತಹಶೀಲ್ದಾರ್ ಕೆ.ಗುರುಬಸವರಾಜ್ ಪ್ರತಿಕ್ರಿಯಿಸಿದ್ದಾರೆ.