ರಿಪ್ಪನ್ಪೇಟೆ: ಉಪ್ಪಿಟ್ಟು, ದೋಸೆ, ಚಿತ್ರನ್ನಾ, ಪುಳಿಯೊಗರೆ, ಅನ್ನಸಾರು, ಇಡ್ಲಿ, ಚಪಾತಿ... ಇದು ಯಾವುದೋ ಹೋಟೆಲ್ನ ಮೇನು ಕಾರ್ಡ್ ಅಲ್ಲ; ಸರ್ಕಾರಿ ಶಾಲೆಯ ಮಕ್ಕಳ ಮಧ್ಯಾಹ್ನದ ಊಟದ ವೇಳೆ ಪಾಟಿ ಚೀಲದಿಂದ ಹೊರಬಂದ ಡಬ್ಬಿಗಳಲ್ಲಿದ್ದ ತಿಂಡಿಗಳು!
ಸರ್ಕಾರದ ಬಿಸಿಯೂಟದ ಯೋಜನೆಯಡಿ ಶಾಲೆಯ ಮಕ್ಕಳಿಗೆ ನಿತ್ಯವೂ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿತ್ತು. ಆದರೆ, ಮೂರು ದಿನಗಳಿಂದ ಅಡುಗೆ ಸಿಬ್ಬಂದಿ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ನಡೆಸುತ್ತಿರುವುದರಿಂದ ಮಕ್ಕಳ ಬಿಸಿಯೂಟಕ್ಕೆ ಕತ್ತರಿ ಬಿದ್ದಿದೆ.
ಶಾಲಾ ಮಕ್ಕಳ ಮಧ್ಯಾಹ್ನದ ಊಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಚಂದ್ರಪ್ಪ ಹೇಳಿಕೆ ನೀಡಿದ್ದಾರೆ. ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಶೇ 90ಕ್ಕೂ ಅಧಿಕ ಶಾಲೆಯಲ್ಲಿ ಶಿಕ್ಷಕರ ನಿರ್ದೇಶನದಂತೆ ಮಕ್ಕಳು ಮನೆ ಊಟಕ್ಕೆ ಮೊರೆ ಹೋಗಿದ್ದಾರೆ.
ರಿಪ್ಪನ್ಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಎಸ್ಡಿಎಂಸಿ ಸದಸ್ಯರು ಸದಸ್ಯರು ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸುವ ಮೂಲಕ ನಾಗರಿಕರ ಪ್ರಶಸಂಸೆಗೆ ಪಾತ್ರರಾಗಿದ್ದಾರೆ.
ಇದುವರೆಗೆ ಎಲ್ಲರೂ ಒಟ್ಟಿಗೆ ಕುಳಿತು ಐಕ್ಯ ಮಂತ್ರದೊಂದಿಗೆ ಒಂದೇ ಮಾದರಿಯ ಊಟ ಮಾಡುತ್ತಿದ್ದರು. ಆದರೆ, ಈಗ ತರಹೇವಾರಿ ತಿಂಡಿಗಳು ಬಾಕ್ಸ್ನಿಂದ ಹೊರ ಬರುತ್ತಿರುವುದು ಕಂಡು ಬಂತು.