ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ಯ (ಕೆಬಿಸಿ) ಒಂಬತ್ತನೇ ಆವೃತ್ತಿ, ಹೆಸರು ನೋಂದಣಿ ಸಮಯದಲ್ಲೇ ಭಾರಿ ಸುದ್ದಿ ಮಾಡಿತ್ತು. ಮೂರು ವರ್ಷಗಳ ನಂತರ ಅಮಿತಾಭ್ ಅವರ ‘ಲಾಕ್ ಕರ್ ದಿಯಾ ಜಾಯೇ’ ಎಂಬ ಮಾತು, ನೀರವ ಮೌನದ ಬೆನ್ನಲ್ಲಿ ಬರುವ ಹಿನ್ನೆಲೆ ಸಂಗೀತಕ್ಕೆ ಕಿವಿಯಾಗುವ ವೀಕ್ಷಕರ ಎದೆ ಬಡಿತ ಹೆಚ್ಚುತ್ತಿದೆ.
ಮತ್ತೊಂದೆಡೆ, ಟ್ವಿಟರ್ನಲ್ಲಿ ಸದಾ ಕ್ರಿಯಾಶೀಲರಾಗಿರುವ ‘ಬಿಗ್ ಬಿ’ ಅವರನ್ನು ಟ್ವಿಟರ್ನಲ್ಲೇ ಕಾಲೆಳೆದು ಟ್ರೋಲ್ ಮಾಡುತ್ತಿದ್ದಾರೆ ಟ್ವೀಟಿಗರು. ವಿಶೇಷವಾಗಿ, ‘ಲಾಕ್ ಕರ್ ದಿಯಾ ಜಾಯೇ’ ಎಂಬ ಮಾತನ್ನೇ ಟ್ರೋಲ್ ಮಾಡುತ್ತಿರುವುದು ಮೋಜಿನ ಸಂಗತಿ. ‘ಅಮಿತಾಭ್ ಅವರು ಕೆಬಿಸಿಯಲ್ಲಿ ಬ್ಯುಸಿಯಾಗಿರುವ ಕಾರಣ ಟ್ವೀಟ್ ಮಾಡೋದಿಕ್ಕೆ ಅವರಿಗೆ ಪುರುಸೊತ್ತೇ ಸಿಗುತ್ತಿಲ್ಲ ಪಾಪ’ ಎಂದು, ಟ್ವೀಟಿಗರೊಬ್ಬರು ಬಿಗ್ ಬಿ ಕಾಲೆಳೆದಿದ್ದಾರೆ.
ಕುನಾಲ್ ಕುಮ್ರಾ ಎಂಬಾತನ ಟ್ವೀಟ್ ನೋಡಿ: ಅಮಿತಾಭ್– ಯಾವ ಲೈಫ್ಲೈನ್ ಬಳಸಿಕೊಳ್ಳುತ್ತೀರಿ?
ಸ್ಪರ್ಧಿ– ಫೋನ್ ಗೆಳೆಯ ಅಮಿತಾಭ್– ನಿಮ್ಮ ಗೆಳೆಯನ ಬಳಿ ಆಧಾರ್ ಕಾರ್ಡ್ ಇದೆಯಾ?’...
ಸ್ಪರ್ಧಿಯ ಆಸನದಲ್ಲಿ ಅಭಿಷೇಕ್ ಬಚ್ಚನ್ ಕುಳಿತಿದ್ದರೆ ತಂದೆ– ಮಗನ ಸಂಭಾಷಣೆ ಹೇಗಿದ್ದೀತು ಎಂದು ಪಕ್ಚಿಪಕ್ ರಾಜಾ ಬಾಬು ಎಂಬಾತ ಟ್ವೀಟ್ ಮಾಡಿರುವುದು ಹೀಗೆ:
ಅಮಿತಾಭ್– ಈಗ ಚೆಕ್ಗೆ ಸಹಿ ಮಾಡುವ ಸಮಯ...
ಅಭಿಷೇಕ್– ನಿಮ್ಮ ಕ್ರೆಡಿಟ್ ಕಾರ್ಡ್ ಯಾಕೆ ಕೊಡಬಾರದು?
‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಖುಲಾಸೆಗೊಂಡ ಬಾಲಿವುಡ್ ನಟನನ್ನು ಸ್ಪರ್ಧಿಯಾಗಿಸಿದ್ದಾರೆ ಪಿಎಚ್ಡಿ ಇನ್ ಪಕ್ಚೋಡಿ ಎಂಬ ಹೆಸರಿನ ಟ್ವೀಟಿಗ.
‘ಅಮಿತಾಭ್– ಆರ್ ಯೂ ಶ್ಯೂರ್?
ಸಲ್ಮಾನ್– ಶ್ಯೂರ್
ಅಮಿತಾಭ್– ಕಾನ್ಫಿಡೆಂಟ್?
ಸಲ್ಮಾನ್– ಕಾನ್ಫಿಡೆಂಟ್
ಅಮಿತಾಭ್– ಪಕ್ಕಾ?
ಸಲ್ಮಾನ್– ಪಕ್ಕಾ
ಅಮಿತಾಭ್– ಲಾಕ್ ಕರ್ ದಿಯಾ ಜಾಯೇ?
ಸಲ್ಮಾನ್– ದೇಶದ ಯಾವ ಜಡ್ಜ್ಗೂ ಆಗಿಲ್ಲ. ನೀವೊಮ್ಮೆ ಪ್ರಯತ್ನಿಸಿ ನೋಡಿ...
ಆಗಸ್ಟ್ 28ರಂದು ಆರಂಭವಾಗಿರುವ ಒಂಬತ್ತನೇ ಆವೃತ್ತಿ ಮೊದಲ ದಿನದಿಂದಲೂ ಹಿಂದೆಂದಿಗಿಂತಲೂ ಆಕರ್ಷಣೆ ಪಡೆದುಕೊಂಡಿದೆ. ವಾಹಿನಿಯ ಟಿಆರ್ಪಿ ಹಿಂದಿನ ಎಂಟು ಆವೃತ್ತಿಗಳಲ್ಲಿ ಕಂಡುಕೇಳರಿಯದಷ್ಟು ಮೇಲೇರಿದೆಯಂತೆ. ಇಷ್ಟೇ ಅಲ್ಲ, ಈ ಆವೃತ್ತಿಯಲ್ಲಿ ಗೆದ್ದವರಿಗೆ ಬರೋಬ್ಬರಿ ಏಳು ಕೋಟಿ ರೂಪಾಯಿ ಸಿಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.