ರಾಮನಾಥಪುರ (ಕೊಣನೂರು): ಇಲ್ಲಿ ನಡೆಯುತ್ತಿರುವ ಕಾವೇರಿ ಪುಷ್ಕರ ಸ್ನಾನ ಕಾರ್ಯಕ್ರಮದಲ್ಲಿ ಭಕ್ತರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಶುಕ್ರವಾರ ಪರಿಶೀಲಿಸಿದ ಸಚಿವ ಎ.ಮಂಜು ಅವರೂ ಪುಷ್ಕರ ಸ್ನಾನ ಕೈಗೊಂಡರು. ಇದಕ್ಕೂ ಮುನ್ನ ಭಕ್ತರ ಸುರಕ್ಷತೆಗಾಗಿ ನಿರ್ಮಿಸಿರುವ ತಂತಿಬೇಲಿ ಮತ್ತು ಇತರೆ ಸೌಲಭ್ಯಗಳ ಮಾಹಿತಿ ಪಡೆದು, ಪರಿಶೀಲಿಸಿದರು.
‘ವಿಶ್ವ ಬ್ರಾಹ್ಮಣ ಮಠದ ಶ್ರೀ ಶಿವ ಸುಜ್ಞಾನ ತೀರ್ಥಸ್ವಾಮಿಗಳ ಜೊತೆ ಸೌಲಭ್ಯಗಳ ಜೊತೆಗೂ ಸೌಲಭ್ಯಗಳ ಕುರಿತು ಚರ್ಚಿಸಿದ ಅವರು, 12 ದಿನ ಕಾರ್ಯಕ್ರಮ ಸುಗಮವಾಗಿ ಸಾಗಲು ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು.
ಪುಣ್ಯ ಸ್ನಾನ, ಸಂಕಲ್ಪ , ತಿಲ ತರ್ಪಣ ಹಾಗೂ ಪಿಂಡ ಪ್ರದಾನಕ್ಕಾಗಿ ಬರುವ ಭಕ್ತರಿಂದ ಹಣ ವಸೂಲಿ ಮಾಡದೇ ಭಾಸ್ಕರ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಲು ಅವಕಾಶ ಇರುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್ ಪ್ರಸನ್ನ ಮೂರ್ತಿ ಅವರಿಗೆ ಸೂಚಿಸಿದರು.
ಪುಷ್ಕರ ಸ್ನಾನ ಸಲ್ಲಿಸಿ ಸೂರ್ಯದೇವನಿಗೆ ಪೂಜೆಸಲ್ಲಿಸಿದರು. ನಂತರ ದೇವರ ದರ್ಶನ ಪಡೆದರು. ಇದೇ ಸಂದರ್ಭ ಲೋಕ ಕಲ್ಯಾಣಾರ್ಥ ಸುಜ್ಞಾನ ತೀರ್ಥ ಸ್ವಾಮೀಜಿ ಅವರು ರುದ್ರಹೋಮ ನೆರವೇರಿಸಿದರು. ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು.