ಸಾತನೂರು (ಕನಕಪುರ): ಗ್ರಾಮದಲ್ಲಿ ಒಂದೂ ಬಾಕಿ ಇಲ್ಲದಂತೆ ಎಲ್ಲರ ಮನೆಗೂ ಶೌಚಾಲಯ ನಿರ್ಮಾಣ ಮಾಡಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಮ್ ಹೇಳಿದರು.
ತಾಲ್ಲೂಕಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಮಂದೆ, ಸೋಲಿಗೇರಿ, ಸಂಬಾಪುರ ಗ್ರಾಮದಲ್ಲಿ ಬಾಕಿ ಇರುವ ಶೌಚಾಲಯದ ಮನೆಗಳನ್ನು ಪರಿಶೀಲನೆ ಮಾಡಿದರು. ಹೊಸದಾಗಿ ನಿರ್ಮಿಸುತ್ತಿರುವ ಶೌಚಾಲಯ ಗುಂಡಿಗಳನ್ನು ವೀಕ್ಷಿಸಿ ಮಾತನಾಡಿದರು.
ಸ್ವಚ್ಛ ಭಾರತ ಮಿಷನ್ನಲ್ಲಿ 100 ರಷ್ಟು ಪ್ರಗತಿ ಸಾಧಿಸಬೇಕಾದರೆ ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಹೊಂದಲೇಬೇಕು. ಆಗ ಮಾತ್ರ ಬಯಲು ಬಹಿರ್ದೆಸೆ ಮುಕ್ತ ಪಂಚಾಯಿತಿ ಮಾಡಲು ಸಾಧ್ಯ ಎಂದರು.
ಕಾಡಳ್ಳಿ ಗ್ರಾಮದ ಮುಖಂಡ ಬೂಹಳ್ಳಿ ಉಮೇಶ್ ಮಾತನಾಡಿ ‘ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಶೌಚಾಲಯ ನಿರ್ಮಾಣ ಮಾಡಬೇಕಾದರೆ ಕೆಲವರಿಗೆ ಹಣಕಾಸಿನ ಮುಗ್ಗಟ್ಟಿದೆ. ನಾವು ಸದ್ಯದ ಖರ್ಚುಭರಿಸಿ ನಂತರ ಫಲಾನುಭವಿಗಳಿಂದ ಹಣ ಪಡೆದುಕೊಳ್ಳಬೇಕಿದೆ’ ಎಂದರು.
ಮುಖಂಡ ಕುಮಾರ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುರಿಮಂದೆ, ಸಂಬಾಪುರ ಮತ್ತು ಸೋಲಿಗೇರಿಯಲ್ಲಿ ಹೆಚ್ಚಿನ ಶೌಚಾಲಯ ನಿರ್ಮಾಣವಾಗಬೇಕಿದೆ. ಶೀಘ್ರವೇ ಮೂರು ಗ್ರಾಮಗಳ ಶೌಚಾಲಯ ನಿರ್ಮಾಣ ಮುಗಿಸಲಾಗುವುದು ಎಂದು ಹೇಳಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾಸಪ್ಪ, ಸದಸ್ಯ ರಮೇಶ್ ಇದ್ದರು.