ದಾವಣಗೆರೆ: ನಮ್ಮ ಜನ ಪರಿಸ್ಥಿತಿಗೆ ಬೇಗ ಹೊಂದಿಕೊಳ್ಳುತ್ತಾರೆ. 15 ವರ್ಷಗಳಿಂದ ಪದೇ ಪದೇ ಬರುತ್ತಿರುವ ಬರಕ್ಕೆ ಈಗ ಒಗ್ಗಿಕೊಂಡಿದ್ದಾರೆ. ಸರ್ಕಾರ ನೀರು ಕೊಡದಿದ್ದರೂ ಸಹಿಸಿಕೊಂಡಿದ್ದಾರೆ. ಸಾರ್ವಜನಿಕರು ನೀರಿನ ಬದಲು ಬೀರಿನತ್ತ ಹೊರಳಿದ್ದಾರೆ... ಹೀಗೆಂದು ವ್ಯಂಗ್ಯಮಿಶ್ರಿತ ಹಾಸ್ಯ ಮಾಡಿದವರು ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.
ಭರಮಸಾಗರದ ದೊಡ್ಡಕೆರೆ, ಸಣ್ಣಕೆರೆ, ಎಮ್ಮೆದೊಡ್ಡಿಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ರಾಜನಹಳ್ಳಿ ವಿಸ್ತರಿತ ಏತನೀರಾವರಿ ಯೋಜನೆಯ ಭೂಮಿ ಪೂಜೆ ಸಮಾರಂಭದಲ್ಲಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರೆದುರು ಜನರಿಗೆ ಹೀಗೆ ಬಿಸಿ ಮುಟ್ಟಿಸಿದರು.
‘ಜಗತ್ತಿನಲ್ಲೇ ಶ್ರೇಷ್ಠ ಪಾನೀಯ ನೀರು. ಜನಕ್ಕೆ ಬೇಕಾಗಿರುವುದೂ ನೀರು. ಆದರೆ, ಎಲ್ಲಾ ಸರ್ಕಾರಗಳು ಕೊಟ್ಟಿರುವುದು ಬೀರು. ನೀರು ಕೊಟ್ಟರೆ ರೈತರೇ ನಿಮಗೆ ಸಾಲ ಕೊಡುತ್ತಿದ್ದರು’ ಎಂದು ತರಳಬಾಳು ಶ್ರೀಗಳು ಚುರುಕು ಮುಟ್ಟಿಸಿದಾಗ ಎಂ.ಬಿ.ಪಾಟೀಲ, ಎಚ್.ಆಂಜನೇಯ ಅವರ ಮುಖ ಬಾಡಿತು.