ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಮೆಟ್ಟಿ ಬದುಕು ಕಟ್ಟಿ...

Last Updated 18 ಸೆಪ್ಟೆಂಬರ್ 2017, 9:12 IST
ಅಕ್ಷರ ಗಾತ್ರ

ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಕೋಳಗಾಲ ಗ್ರಾಮ ನನ್ನ ಹುಟ್ಟೂರು. ತಂದೆ ಚಾಮರಾಜ ಅರಸ್, ತಾಯಿ ದೇವರಾಜ ಅಮ್ಮಣ್ಣಿ, ನಾವು ಏಳು ಜನ ಅಣ್ಣ ತಮ್ಮಂದಿರು. ಅದರಲ್ಲಿ ನಾನು ಎರಡನೆಯವ. ಹಳ್ಳಿಯ ಈಶ್ವರನ ದೇವಸ್ಥಾನದಲ್ಲಿಯೇ ಬಾಲ್ಯದ ಓದು ನಡೆಯಿತು. ನಾನು ಏಳನೇ ತರಗತಿಗೆ ಬಂದಾಗ ನಮ್ಮೂರಿಗೆ ಶಾಲಾ ಕಟ್ಟಡ ಬಂತು. ಅಲ್ಲಿಯನತಕ ಕಪಿಲಾ ನದಿ ದಾಟಿಕೊಂಡು ಪಕ್ಕದೂರಿಗೆ ಹೋಗಿ ಪರೀಕ್ಷೆ ಬರೆಯಬೇಕಿತ್ತು.

ವ್ಯವಸಾಯವೆಂದರೆ ನನಗೆ ತುಂಬಾ ಇಷ್ಟ. ಚಿತ್ರರಂಗಕ್ಕೆ ಬಂದದ್ದೂ ಕೂಡ ವ್ಯವಸಾಯದ ಮೇಲಿನ ಪ್ರೀತಿಯಿಂದಲೇ. ನಮ್ಮ ತಂದೆಗೆ ಇಸ್ಪೀಟ್ ಆಡುವ ಚಟ. 24 ಗಂಟೆಯೂ ಇಸ್ಪೀಟ್ ಆಡುತ್ತಿದ್ದರು. ಕೇವಲ ಹತ್ತು ಸಾವಿರ ರೂಪಾಯಿಗೆ ಎರಡು ಎಕರೆ ಜಮೀನನ್ನು ಆಟದಲ್ಲಿ ಸೋತುಬಿಟ್ಟರು. 'ಯಾಕೆ ಮಾರಿದ್ರಿ? ಹೀಗೆ ಮಾಡಿದ್ದು ತಪ್ಪು ಅಲ್ವಾ?' ಅಂತ ಪ್ರಶ್ನಿಸಿದಾಗ, 'ನಮ್ಮಪ್ಪನ ಆಸ್ತಿ, ನಾನು ಏನು ಬೇಕಾದರೂ ಮಾಡಿಕೊಳ್ತೀನಿ. ನೀ ಯಾರು ಕೇಳೋಕೆ?' ಅಂದ್ರು.

ಮಾತಿಗೆ ಮಾತು ಬೆಳೆಯಿತು ಅಪ್ಪ ಮನೆಬಿಟ್ಟು ಹೋಗು ಅಂದ್ರು. ಆಗ ಮನೆ ಬಿಟ್ಟು ಬಂದು ಬಿಟ್ಟೆ. ಆಗ ನನಗೆ ಸುಮಾರು 19 ವರ್ಷ.

ಸೀದಾ ಮೈಸೂರಿಗೆ ಬಂದೆ. ಅಲ್ಲಿನ ಪ್ರೀಮಿಯರ್ ಸ್ಟುಡಿಯೊದಲ್ಲಿ  ಅಣ್ಣ ಸುಂದರಕೃಷ್ಣ ಅರಸ್ ಸಿನಿಮಾ ಚಿತ್ರೀಕರಣದಲ್ಲಿದ್ದರು. ಅವರನ್ನು ಭೇಟಿಯಾಗಿ ನಡೆದುದನ್ನು ವಿವರಿಸಿದೆ.

ಅವರು 'ಏನೂ ಆಗೋಲ್ಲ ಬಿಡೋ, ಎಲ್ಲಾ ಸರಿಯಾಗುತ್ತೆ' ಅಂತ ಧೈರ್ಯ ತುಂಬಿದ್ರು. ಅವರ ಸಿನಿಮಾಕ್ಕೆ ಕ್ಯಾಮೆರಾಮನ್ ಆಗಿದ್ದ ಮಧು ಸರ್ ಜತೆಯಲ್ಲಿ ಕೆಲಸ ಮಾಡು ಅಂದ್ರು. ಆದರೆ, ಸಿನಿಮಾ ಮುಗಿಯುವತನಕ ಮಧು ಅವರು ಬರಲೇ ಇಲ್ಲ. ಅವರ ಸಹಾಯಕರೇ ಸಿನಿಮಾ ಪೂರ್ಣಗೊಳಿಸಿದರು. ಅಲ್ಲಿಯತನಕ ಅಣ್ಣನಿಗೆ ಸಹಾಯಕನಾಗಿದ್ದೆ. ಮುಂದೆ ಅಣ್ಣನಿಗೆ ‘ಸಂಗಮ ಸಾಕ್ಷಿ’ ಅನ್ನುವ ತುಳು ಸಿನಿಮಾ ನಿರ್ದೇಶನಕ್ಕೆ ಆಫರ್ ಬಂತು. ಆ ಚಿತ್ರಕ್ಕೆ ಎನ್.ಸಿ.ರಾಜನ್ ಅವರು ಸಂಕಲನಕಾರರಾಗಿ ನಿಯುಕ್ತರಾಗಿದ್ದರು. ಅವರಿಗೆ ₹500 ಮುಂಗಡ ಕೊಟ್ಟು ಬುಕ್ ಮಾಡಲಾಗಿತ್ತು. ಆದರೆ, ಅವರು ಅಕಾಲ ಮರಣಕ್ಕೀಡಾದರು. ಆಗ ಅಣ್ಣ 'ನೀನೇ ಎಡಿಟ್ ಮಾಡೋ' ಅಂದ್ರು. ಆ ಸಿನಿಮಾ ನೋಡಿದರೆ ಈಗಲೂ ಮುಜುಗರವಾಗುತ್ತೆ. ಆದರೆ, ತಪ್ಪು ಮಾಡಿಯೇ ಅಲ್ವಾ ಮನುಷ್ಯ ಕಲಿಯೋದು?

ಹೀಗೆ ಸಂಕಲನದ ಕೆಲಸ ಕಲಿಯುತ್ತಲೇ ಒಂದೊಂದೇ ಸಿನಿಮಾಗಳ ಆಫರ್‌ಗಳು ಬರತೊಡಗಿದವು. ಬಾಲು ಮಹೇಂದರ್ ಅವರ ’ಕೋಕಿಲಾ‘ ಸಿನಿಮಾಕ್ಕೆ ಉಮೇಶ್‌ ಕುಲಕರ್ಣಿ ಸಂಕಲನಕಾರರಾಗಿದ್ದರು. ಅವರಿಗೆ ನಾನು ಸಹಾಯಕನಾಗಿದ್ದೆ. ಅದೇ ಸಮಯಕ್ಕೆ ಅವರು ’ಘಟಶ್ರಾದ್ಧ’ಕ್ಕೂ ಸಂಕಲನಕಾರರಾಗಿದ್ದರು. ಅಲ್ಲಿಯೂ ಅವರಿಗೆ ನಾನೇ ಸಹಾಯಕ.

ಎರಡೂ ಸಿನಿಮಾ ಒಟ್ಟಿಗೆ ಫೈನಲ್‌ಗೆ ಬಂತು. ಅದೇ ಸಮಯದಲ್ಲಿ ಸಂಗೀತ ನಿರ್ದೇಶಕರಾದ ಸಲೀಲ್ ಚೌಧರಿ ಮತ್ತು ಬಿ.ವಿ.ಕಾರಂತರು ಸಮ್ಮೇಳನವೊಂದರಲ್ಲಿ ವಿದೇಶಕ್ಕೆ ಹೋಗಬೇಕಾಗಿತ್ತು. ಅವರಿಬ್ಬರೂ ಹೋಗುವ ಮುನ್ನವೇ ಕೆಲಸ ಮುಗಿಸಬೇಕಿತ್ತು. ಹಗಲೂ ರಾತ್ರಿ ಕೆಲಸ ಮಾಡಿ ಮುಗಿಸಿದೆವು.

ಉಮೇಶ್ ಕುಲಕರ್ಣಿ ಯಾವುದೇ ಸಿನಿಮಾ ಎಡಿಟಿಂಗ್ ಮಾಡುವಾಗ ಮೊದಲು ಆ ಸಿನಿಮಾದ ರಷಸ್ (ಮಾಸ್ಟರ್ ಪ್ರಿಂಟ್) ನೋಡಿ ಒಪ್ಪಿಕೊಳ್ಳುತ್ತಿದ್ದರು. ಅವರ ಬಳಿ ‘ ತೀಸರ್ ಚಿಟ್’ ಅನ್ನೋ ಕೊಂಕಣಿ ಸಿನಿಮಾ ಬಂತು. ಅದು ಅವರಿಗೆ ಇಷ್ಟವಾಗಲಿಲ್ಲ. ಆಗ ಆ ಸಿನಿಮಾದ ನಿರ್ದೇಶಕ ಪೀಟರ್ ಗೋನ್ಸಾಲ್ವಿಸ್ ಅವರು ನನಗೆ ಸಂಕಲನ ಮಾಡಲು ಕೊಟ್ಟರು. ಅಲ್ಲಿಂದ ಸ್ವತಂತ್ರ ಸಂಕಲನದ ಮೇಲೆ ಹಿಡಿತ ಸಿಕ್ಕಂತಾಯಿತು.

ಕ್ಯಾಮೆರಾಮನ್ ಎಸ್‌.ರಾಮಚಂದ್ರ ಅವರು ಯಾವುದೇ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾಗ ಮೊದಲು ಯಾರು ಎಡಿಟಿಂಗ್ ಮಾಡ್ತಾರೆ ಅಂತ ಕೇಳುತ್ತಿದ್ದರು. ಯಾರೂ ಇಲ್ಲ ಅಂದರೆ ನನ್ನ ಹೆಸರನ್ನು ಸೂಚಿಸುತ್ತಿದ್ದರು. ಅವರಿಂದಾಗಿ ಹಲವು ಸಿನಿಮಾಗಳಿಗೆ ಸಂಕಲನಕಾರನಾದೆ.

ಟಿ.ಎಸ್.ನಾಗಾಭರಣ ನಿರ್ದೇಶನದ ‘ಬ್ಯಾಂಕರ್ ಮಾರ್ಗಯ್ಯ’ಕ್ಕೆ ಅವರೇ ಕ್ಯಾಮೆರಾಮನ್. ಅದಕ್ಕೂ ನಾನೇ ಸಂಕಲನಕಾರ. ಟಿ.ಎಸ್.ನರಸಿಂಹನ್ ನಿರ್ಮಾಪಕ. ಅವರು ತುಂಬಾ ಶಿಸ್ತಿನ ಮನುಷ್ಯ. ಸಣ್ಣಸಣ್ಣದಕ್ಕೂ ಸಿಟ್ಟಾಗುತ್ತಿದ್ದರು. ಸೆಟ್‌ನಲ್ಲಿ ಯಾರೋ ಮಾಡಿದ ತಪ್ಪಿಗೆ ನಾನೇ ಬಲಿಯಾಗುತ್ತಿದ್ದೆ. ಆದರೆ, ’ಬ್ಯಾಂಕರ್ ಮಾರ್ಗಯ್ಯ’ ಸಿನಿಮಾದ ಕೆಲಸ ನೋಡಿ ನರಸಿಂಹನ್ ಅವರಿಗೆ ನಾನು ತುಂಬಾ ಇಷ್ಟವಾಗಿಬಿಟ್ಟಿದ್ದೆ. ಅವರಿಗೆ ಅನೇಕ ದೇವಸ್ಥಾನಗಳ ಸರಣಿಯ ಸಾಕ್ಷ್ಯಚಿತ್ರಗಳನ್ನೂ ಮಾಡಿಕೊಟ್ಟೆ.

ಕೆಲಸ ಇರಲಿ ಬಿಡಲಿ ಪ್ರತಿದಿನ ಬೆಳಿಗ್ಗೆ ನರಸಿಂಹನ್ ಅವರ ಮನೆಗೆ ನಾನು ಹೋಗಬೇಕಾಗಿತ್ತು. ಅವರ ಹೆಂಡತಿ ಪದ್ಮಿನಿ ಅಂತ. ಪದ್ಮಿನಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿಕ್ಕಮ್ಮ. ನರಸಿಂಹನ್ ಮತ್ತು ನಾನು ಮಾತುಕತೆ ನಡೆಸುತ್ತಿದ್ದಾಗ ಪದ್ಮನಿಯವರೇ ಕಾಫಿ ತಂದುಕೊಡುತ್ತಿದ್ದರು. ನನ್ನನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಅದೊಂಥರಾ ನಮ್ಮನೆಯಂತಾಗಿತ್ತು.

ಮುಂದೆ ನರಸಿಂಹನ್‌ ನಿರ್ಮಾಣದಲ್ಲಿ ’ಮಾಲ್ಗುಡಿ ಡೇಸ್’ ಆರಂಭವಾಯಿತು ಅದಕ್ಕೆ ಶಂಕರ್‌ನಾಗ್ ನಿರ್ದೇಶಕ. ಆ ದಿನಗಳು ’ಮಾಲ್ಗುಡಿ ಡೇಸ್‌’ ಅಲ್ಲ, ’ಮಾಲ್ಗುಡಿ ನೈಟ್ಸ್‌’ ಆಗಿದ್ದವು! 24 ಗಂಟೆಯೂ ಕೆಲಸ. ಬೆಳಿಗ್ಗೆ ಎಡಿಟಿಂಗ್, ರಾತ್ರಿ ಮಿಕ್ಸಿಂಗ್, ಬೆಳಗಿನ ಜಾವ 5ಕ್ಕೆ ಹೋಗಿ ಮತ್ತೆ 9ಕ್ಕೆ ’ಸಂಕೇತ್’ ಸ್ಟುಡಿಯೊಕ್ಕೆ ಬರ್ತಾ ಇದ್ದೆ. ‘ಮಾಲ್ಗುಡಿ ಡೇಸ್’ ನೋಡಿ ತಮಿಳು ಚಿತ್ರನಿರ್ದೇಶಕ ಮಣಿರತ್ನಂ ತುಂಬಾ ಇಂಪ್ರೆಸ್ ಆಗಿದ್ದರು. ಅವರಿಗೆ ನನ್ನ ಕೆಲಸ ಇಷ್ಟವಾಗಿತ್ತು. ಅಷ್ಟೊತ್ತಿಗೆ ನಾನು ’ಸ್ಟೋನ್ ಬಾಯ್’ ಸೀರಿಯಲ್‌ಗೂ ಕೆಲಸ ಮಾಡಿದ್ದೆ.

</p><p>ಮಣಿರತ್ನಂ ಅವರನ್ನು ನಾನು ಭೇಟಿ ಮಾಡಿದ್ದಾಗ ನನಗಿನ್ನೂ 33 ವರ್ಷ. ‘ನನ್ನ ಸಿನಿಮಾಗಳನ್ನು ನೋಡಿದ್ದೀರಾ? ಯಾವ ಸಿನಿಮಾ ಇಷ್ಟವಾಯ್ತು?’ ಅಂತ ಮಣಿರತ್ನಂ ಕೇಳಿದರು. ಆಗ ನಾನು ಇಷ್ಟವಾಗದೇ ಇರುವ ಸಿನಿಮಾದ ಬಗ್ಗೆ ಹೇಳ್ತೀನಿ ಅಂದೆ. ಸರಿ ಹೇಳಿ ಅಂದ್ರು. ಸರ್ ನಿಮ್ಮ ‘ಅಂಜಲಿ’ ಸಿನಿಮಾದ ಅಂತ್ಯ ನನಗಿಷ್ಟವಾಗಲಿಲ್ಲ. ಅದನ್ನು ಪಾಸಿಟಿವ್ ಆಗಿ ಮುಕ್ತಾಯ ಮಾಡಬೇಕಿತ್ತು ಅಂದೆ. ಅವರು ಇಲ್ಲ ಆ ಮಗುವಿಗೆ ಜೀವನವೇ ಇಲ್ಲವಲ್ಲ ಅಂತ ವಾದಿಸಿದರು.</p><p>ಆಗ ನಾನು, ಲೈಫ್ ಇರಲ್ಲ ಅಂತ ಗೊತ್ತಿದ್ದರೂ ಅಂಥವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿರುವವರನ್ನು ನೋಡಿದ್ದೇನೆ ಸರ್ . ಹಾಗಾಗಿ, ಸಿನಿಮಾದ ಕೊನೆಯಲ್ಲಿ ಆ ಹುಡುಗಿ ಬಾಯಲ್ಲಿ ’ಅಮ್ಮಾ’ ಅಂತ ಹೇಳಿಸಿ ಅಲ್ಲಿಗೇ ನಿಲ್ಲಿಸಬೇಕಿತ್ತು ಅಂದೆ. ಇದು ಮಣಿರತ್ನಂ ಅವರಿಗೆ ಒಪ್ಪಿಗೆಯಾಯಿತು.</p><p>ತಕ್ಷಣವೇ ’ದಳಪತಿ’ ಚಿತ್ರಕ್ಕೆ ಎಡಿಟರ್ ಆಗಿ ನನ್ನನ್ನು ಬುಕ್ ಮಾಡಿದರು. ಹೀಗೆ ಅವರ ಒಡನಾಟದಲ್ಲಿ ರೋಜಾ, ಬಾಂಬೆ, ಇರುವರ್, ದಿಲ್‌ಸೇ ಸೇರಿದಂತೆ ಏಳು ಸಿನಿಮಾಗಳನ್ನು ಮಾಡಿದೆ. ’ಬಾಂಬೆ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿಯೂ ಬಂತು.</p><p>ಮಣಿರತ್ನಂ ಅವರಿಗೆ ಇಂಥ ಸೀನ್ ಸರಿಬಂದಿಲ್ಲ ಅಂತ ಮನವರಿಕೆ ಮಾಡಿಕೊಟ್ಟರೆ ರೀಶೂಟ್ ಮಾಡುತ್ತಿದ್ದರು. ‘ರೋಜಾ’ದಲ್ಲಿ ಆರಂಭ ಗೀತೆ ‘ಚಿನ್ನ ಚಿನ್ನ ಆಸೆ’ ಚಿತ್ರೀಕರಣ ಅವರಿಗೆ ಸಮಾಧಾನ ತಂದಿರಲಿಲ್ಲ. ಚಿತ್ರದ ಉಳಿದ ಭಾಗಗಳ ಕೆಲಸ ನಡೆಯುತ್ತಿತ್ತು. ಬಿಡುವಿನ ವೇಳೆಯಲ್ಲಿ ನಾನು, ಸರ್ ನಾಯಕಿ ಹಳ್ಳಿಯ ಮುಗ್ಧ ಹುಡುಗಿ, ಅವಳಿಗೆ ನಾಟಿ ಮಾಡಲು, ಹಿರಿಯರ ಜತೆ ತುಂಟತನ ಮಾಡಲು, ಮಕ್ಕಳೊಂದಿಗೆ ಆಡಲು ಇಷ್ಟ.</p><p>ಅದನ್ನೇ ಪಿಕ್ಚರೈಸ್ ಮಾಡಿದರೆ ಚೆನ್ನಾಗಿರುತ್ತೆ. ಅದರಲ್ಲಿ ಅವಳ ತುಂಟತನ ತೋರಿಸಿದಂತಾಗುತ್ತದೆ ಅಂದೆ. ತಕ್ಷಣವೇ ಅವರು ಲೆಟರ್ ಪ್ಯಾಡ್ ತರಿಸಿ 150 ಶಾಟ್‌ಗಳನ್ನು ಚಕಚಕನೆ ಬರೆದು ನನಗೆ ತೋರಿಸಿ, ಇದು ಓಕೆನಾ ಅಂದೆ. ಸೂಪರ್ ಸಾರ್ ಅಂದೆ.</p><p>1984ರಲ್ಲಿ ನನ್ನ ಮದುವೆ ಮಾಲಾ ಜತೆ ಆಯಿತು. ಆಗಷ್ಟೇ ನನಗೆ ರಾಜ್ಯ ಪ್ರಶಸ್ತಿ ಬಂದಿತು. ಆಗ ನಾನು ಆರ್ಥಿಕವಾಗಿ ಸ್ಥಿತಿವಂತನಾಗಿರಲಿಲ್ಲ. ಕ್ಯಾಮೆರಾಮನ್ ಎಂ.ಎ.ರವೀಂದ್ರ ಅವರ ಕೊಟ್ಟ ದುಡ್ಡಿನಲ್ಲಿ ನನ್ನ ಮದುವೆ ಆಯಿತು. ಮದುವೆ ಮುನ್ನ ನಿಶ್ಚಿತಾರ್ಥದ ದಿನ ಒಂದು ಘಟನೆ ನಡೆಯಿತು. ಯಾರೋ ಒಬ್ಬರು ಯಾರು ಹುಡುಗ ಅಂತ ಕೇಳಿದ್ರು.</p><p>ಲ್ಲಿದ್ದವರು ನನ್ನನ್ನು ತೋರಿಸಿದರು. ಹೋಗಿಹೋಗಿ ಇಂಥವರಿಗೆಲ್ಲಾ ಇಷ್ಟು ಒಳ್ಳೆಯ ಹುಡುಗಿ ಕೊಡ್ತಾ ಇದ್ದಾರಲ್ಲ ಅಂದ್ರು. ಇದು ನನಗೆ ಬಹಳ ಹರ್ಟ್ ಆಯಿತು. ಇವತ್ತು ಯಾರು ಕಮೆಂಟ್ ಮಾಡಿದ್ದಾರೋ ಅವರ ಮುಂದೆಯೇ ಬೆಳೆದು ನಿಲ್ಲಬೇಕೆಂಬ ಛಲ ಬಂತು. ಗೌರವಯುತವಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಉಂಟಾಯಿತು.</p><p>ಬಹಳ ವರ್ಷಗಳಾದ ಮೇಲೆ ಈ ಘಟನೆಯನ್ನು ನನ್ನ ಹೆಂಡ್ತಿಗೆ ಹೇಳಿದೆ. ನನಗಾದ ಅವಮಾನ ನನ್ನ ಮಕ್ಕಳಿಗೆ ಆಗಬಾರದು ಅಂದುಕೊಂಡೆ. ನಮ್ಮ ಸಮಾಜ ಬಹಳ ವಿಚಿತ್ರ. ನಿಮ್ಮಲ್ಲಿ ಏನಾದರೂ ಇದ್ದರೆ ಮಾತ್ರ ಗೌರವ ನೀಡುತ್ತದೆ. ಹಣ, ವಿದ್ವತ್ತು, ಕೆಲಸದಲ್ಲಿ ಸಾಧನೆ ಇದ್ದರೆ ಮಾತ್ರ ಇಲ್ಲಿ ಗೌರವ. ಆದರೆ, ಇದನ್ನು ನಾನು ಮುರಿಯಬೇಕೆಂದುಕೊಂಡೆ.</p><p>ನಾನು ನನ್ನ ಸಹಾಯಕರನ್ನು ಇಂದಿಗೂ ಏಕವಚನದಲ್ಲಿ ಮಾತನಾಡಿಸಿಲ್ಲ. ಇನ್ನು ನನ್ನ ಕಚೇರಿಯಲ್ಲಿ ಒಂದು ಸ್ಟ್ಯಾಡಿಂಗ್ ಆರ್ಡರ್ ಕೊಟ್ಟಿದ್ದೇನೆ. ಏನೆಂದರೆ ತಿಂಡಿ ಅಥವಾ ಊಟದ ಸಮಯದಲ್ಲಿ ಯಾರೇ ಬರಲಿ ಮೊದಲು ಅವರಿಗೆ ಊಟ ಕೊಡಿ ಅಂತ.</p><p>ನನ್ನ ವೃತ್ತಿ ಬದುಕಿಗಾಗಿ ವೈಯಕ್ತಿಕ ಬದುಕನ್ನು ತುಂಬಾ ಕಳೆದುಕೊಂಡಿದ್ದೀನಿ. ಅದರ ಬಗ್ಗೆ ವಿಷಾದವಿದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಬೇಕಲ್ಲ. ಇದು ಅನಿವಾರ್ಯ. ಐ ಫೀಲ್ ವೆರಿ ಸಾರಿ ಫಾರ್ ಮೈ ಫ್ಯಾಮಿಲಿ.</p><p>ನನ್ನ ಮಕ್ಕಳನ್ನು ಹೆಂಡತಿ ತುಂಬಾ ಚೆನ್ನಾಗಿ ನೋಡಿಕೊಂಡರು. ರಾಘವ ಮತ್ತು ಗೌತಮ್ ಅಂತ ಮಕ್ಕಳ ಹೆಸರು. ತುಂಬಾ ಒಳ್ಳೆಯ ಮಕ್ಕಳು. ಚಿಕ್ಕವರಿದ್ದಾಗ ಅವರಿಗೆ ಹೆಚ್ಚಿನ ಸಮಯ ಕೊಡಲಾಗಲಿಲ್ಲ. ರಾಘವನಿಗೆ ಪಾರ್ಥ ಎನ್ನುವ ಮಗನಿದ್ದಾನೆ. ಅವನೊಂದಿಗೆ ಕಾಲ ಕಳೆಯುವುದು ನನಗೆ ತುಂಬಾ ಸಂತಸ ನೀಡುತ್ತದೆ. ಅಂದು ಮಕ್ಕಳಿಗೆ ಅಪ್ಪನಾಗೆ ಸಮಯ ಕೊಡಲಾಗಲಿಲ್ಲ. ಆದರೆ, ಇಂದು ತಾತನಾಗಿ ಪಾರ್ಥನೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ.</p><p>ಅಂದು ಆದ ನೋವನ್ನು ಇಂದು ಮೆಟ್ಟಿ ನಿಂತು ಗೌರವದ ಬದುಕು ಕಟ್ಟಿಕೊಂಡಿದ್ದೇನೆ ಎನ್ನುವ ಹೆಮ್ಮೆ ನನಗಿದೆ. ಅಪ್ಪ ಮಾರಿದ್ದ ಜಮೀನನ್ನು ಮತ್ತೆ ಕೊಂಡುಕೊಂಡ ಸಮಾಧಾನವಿದೆ. ಕಷ್ಟದ ಮೆಟ್ಟಿಲುಗಳೇ ನಿಮ್ಮನ್ನು ಉತ್ತುಂಗಕ್ಕೆ ಕರೆದೊಯ್ಯುತ್ತವೆ ಎನ್ನುವುದನ್ನು ನೆನಪಿಡಿ. ಸಿನಿಮಾದಿಂದಲೇ ಎಲ್ಲವನ್ನೂ ಪಡೆದುಕೊಂಡೆ. ಸಿನಿಮಾಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ. ನನಗೆ ಸಾವು ಅಂತ ಬಂದರೆ ಅದು ನನ್ನ ಎಡಿಟಿಂಗ್ ಟೇಬಲ್ ಮೇಲೆಯೇ ಬರಬೇಕು ಎಂಬ ಆಸೆ ನನ್ನದು.</p><p>***<br/>&#13; <strong>ಪರಿಚಯ<br/>&#13; ಹುಟ್ಟಿದ್ದು: 3–2–1956<br/>&#13; ಕುಟುಂಬ: ಮಾಲಾ (ಪತ್ನಿ), ರಾಘವ, ಗೌತಮ್ (ಮಕ್ಕಳು)<br/>&#13; ಸಂಕಲನ ಮಾಡಿದ ಪ್ರಮುಖ ಚಿತ್ರಗಳು:  ‘ಮೈಸೂರು ಮಲ್ಲಿಗೆ’, ‘ಸಂತ ಶಿಶುನಾಳ ಷರೀಫ’, ‘ಆಸ್ಫೋಟ’, ‘ಸಾಮ್ರಾಟ್‌’, ‘ರೋಜಾ’, ‘ಬಾಂಬೆ’, ‘ರಮಣ’, ‘ಅಮರ್‌ಕಲಂ’ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳು.<br/>&#13; ಪ್ರಶಸ್ತಿ: ಬಾಂಬೆ ಸಿನಿಮಾಕ್ಕಾಗಿ ’ಉತ್ತಮ ಸಂಕಲನಕಾರ’ ರಾಷ್ಟ್ರಪ್ರಶಸ್ತಿ, ಐದು ರಾಜ್ಯ ಪ್ರಶಸ್ತಿ, ತಮಿಳುನಾಡಿನಲ್ಲಿ ಎರಡು ರಾಜ್ಯ ಪ್ರಶಸ್ತಿ, ಡಾ.ವಿಷ್ಣುವರ್ಧನ್ ಪ್ರಶಸ್ತಿ<br/>&#13; ಸಂಪರ್ಕಕ್ಕೆ: 9884021155</strong></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT