ಕೂಡಲಸಂಗಮ: ಕಳೆದ ನಾಲ್ಕ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ಮಲಪ್ರಭಾ ನದಿಗಳು ಸಂಪೂರ್ಣ ತುಂಬಿಕೊಂಡಿದ್ದು ಸುಕ್ಷೇತ್ರ ಕೂಡಲಸಂಗಮದ ಸಂಗಮನಾಥನ ಸನ್ನಿಧಿಗೆ ಬರಲು ಇನ್ನೂ 6 ಮೆಟ್ಟಿಲು ಬಾಕಿ ಇವೆ.
ಕಳೆದ ಹಲವು ದಿನಗಳಿಂದ ಮಳೆ ಯನ್ನೆ ಕಾಣದೆ ಇದ್ದ ಈ ಭಾಗದ ಜನರಿಗೆ ಮಳೆ ಸುರಿದಿರುವುದು ಸಂತಸ ಉಂಟು ಮಾಡಿದೆ. ಆದರೆ ನದಿಯ ದಡದ ಕಟಗೂರ, ತುರಡಗಿ, ಕೂಡಲಸಂಗಮ, ಕಜಗಲ್ಲ, ಕೆಂಗಲ್ಲ, ವರಗೊಡದಿನ್ನಿ, ನಂದನೂರ, ಹೂವನೂರ, ಗಂಜಿಹಾಳ, ಇದ್ದಲಗಿ, ಬಿಸನಾಳಕೊಪ್ಪ, ಬೆಳಗಲ್ಲ, ಕಮದತ್ತ, ಅಡವಿಹಾಳ ಮುಂತಾದ ಗ್ರಾಮದ ಜನರಿಗೆ ನಿರಂತರ ನಾಲ್ಕು ದಿನದಿಂದ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ಅಧಿಕ ಪ್ರಮಾಣದ ನೀರು ಬಂದ ಪರಿಣಾಮ 2009ರಲ್ಲಿ ಸಂಭ ವಿಸಿದ ಪ್ರವಾಹದ ಹಾಗೆ ಆಗಬಾರದು ಎಂದು ಆಂತಕ ವ್ಯಕ್ತಪಡಿಸಿದರು.
ಶನಿವಾರ ರಾತ್ರಿ ಸುರಿದ ಮಳೆಯಿಂದ ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಜೆ 7 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಜನರು ತೊಂದರೆ ಅನುಭವಿಸಿದರು. ಭಾನುವಾರ ತುಂತುರು ಮಳೆ ಸುರಿದಿರುವುದು. ವಿದ್ಯುತ್ ಸಂಪರ್ಕ ಭಾನುವಾರ ಕೂಡಾ ಸಮಪರ್ಕವಾಗಿ ಇರಲಿಲ್ಲ.
ರಾಮಥಾಳ ಸೇತುವೆ ಜಲಾವೃತ
ಅಮೀನಗಡ (ಕಮತಗಿ): ಸಮೀಪದ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ರಾಮಥಾಳ ಸೇತುವೆ ಜಲಾವೃತವಾಗಿದೆ. ಉತ್ತರಿ ಮಳೆ ಕೂಡಿದ ಮೇಲೆ ರೈತರಲ್ಲಿ ಸಂಭ್ರಮ ಮನೆ ಮಾಡಿದೆ.
ಎರಡು ದಿನ ಸುರಿದ ಮಳೆಯಿಂದಾಗಿ ನದಿ, ಹಳ್ಳಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ರಾಮಥಾಳ ಸೇತುವೆ ಸುಮಾರು ಐದಾರು ವರ್ಷಗಳಿಂದ ಮಳೆಯಿಲ್ಲದೇ ತುಂಬಿರಲಿಲ್ಲ. ಈಗ ಅಧಿಕ ಮಳೆಯಾಗಿದ್ದು ಸೇತುವೆ ಭರ್ತಿ ಹರಿಯುತ್ತಿರುವುದರಿಂದ ನೋಡಲು ಮನಸ್ಸಿಗೆ ಮುದವೆನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ರಾಮಥಾಳ ಗ್ರಾಮದ ಶರಣಪ್ಪ ಕೊಪ್ಪದ.
ತುಂಬಿ ಹರಿಯುತ್ತಿರುವ ಜಲಧಾರೆ ನೋಡಲು ಸಮೀಪದ ಗ್ರಾಮಗಳಿಂದ ಜನ ಬರುತ್ತಿದ್ದಾರೆ. ಸುಮಾರು ವರ್ಷ ಗಳಿಂದ ನೀರಿಲ್ಲದೇ ಭಣಭಣ ಎನ್ನುತ್ತಿದ್ದ ಮಲಪ್ರಭಾ ನದಿಯ ಜಲಧಾರೆಯನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ. ಮಳೆಯ ರಭಸಕ್ಕೆ ನೀರು ಹೊಲ ಗದ್ದೆಗಳಲ್ಲಿ ಹರಿದು ಬರುತ್ತಿರುವುದ ರಿಂದ ನೀರು ಮಣ್ಣಿನರಾಡಿಯಾಗಿ ಹರಿಯುತ್ತಿದೆ. ಮೀನುಗಾರರು ಸದ್ಯ ಇಲ್ಲಿ ಬಲೆ ಹಾಕಲು ತಯಾರಿ ನಡೆಸುತ್ತಿದ್ದಾರೆ.
ನೀರು ತುಂಬಿ ಹೀಗೆ ಕೋಡಿಯಾಗಿ ಹರಿಯುತ್ತಿರುವುದರಿಂದ ಮೀನುಗಳು ಅಧಿಕವಾಗಿ ಸಿಗುತ್ತವೆ. ಮೀನುಗಾರ ಯಲ್ಲಪ್ಪ ಚೌವಾಣ ಮಾತನಾಡಿ, ‘ನಾವು ರಾತ್ರಿಯಿಂದ ಇಲ್ಲಿಯೇ ಇದ್ದೆವು. 10 ಕೆ.ಜಿ ತೂಕದ ಮೀನುಗಳು ಬಲೆಗೆ ಬಿದ್ದಿವೆ. ಮತ್ತೆ ಬಲೆ ಹಾಕುತ್ತಿದ್ದು 20ರಿಂದ 30 ಕೆ.ಜಿ ಮೀನು ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದರು.
ಮಲಪ್ರಭಾ ನದಿ ತೀರದಲ್ಲಿರುವ ಹಿರೇಮಾಗಿ, ಚಿಕ್ಕಮಾಗಿ, ಇಂಗಳಗಿ, ಕೈರವಾಡಗಿ ಹಾಗೂ ಹಡಗಲಿ ಗ್ರಾಮ ಗಳಲ್ಲಿರುವ ಚೆಕ್ ಡ್ಯಾಂ ಭರ್ತಿಯಾಗಿ ಹರಿಯುತ್ತಿವೆ.
ಉತ್ತರಿ ಮಳೆಯಿಂದಾಗಿ ಸುತ್ತಮುತ್ತ ಇರುವ ಕೆಲವು ಕೆರೆಗಳಿಗೆ ನೀರು ಬಂದಿದೆ. ಇನ್ನೆರಡು ದಿನ ಹದವಾಗಿ ಮಳೆಯಾದರೆ ಬಹುತೇಕ ಕೆರೆಗಳು ತುಂಬಿ ಕೋಡಿ ಬೀಳುವ ಸಾಧ್ಯತೆ ಇದೆ.
ಹೆಚ್ಚುವರಿ ಮಾರಾಟ ಕೇಂದ್ರ ಸ್ಥಾಪನೆ
ಹುನಗುಂದ: ಹಿಂಗಾರು ಹಂಗಾ ಮಿನ ಬೀಜ ವಿತರಣೆಗಾಗಿ ತಾಲ್ಲೂಕಿನಲ್ಲಿ 5 ಹೆಚ್ಚುವರಿ ಮಾರಾಟ ಕೇಂದ್ರ ತೆರಯಲಾಗುವುದು ಎಂದು ಕೃಷಿ ಇಲಾಖೆ ಪ್ರಕಟಣೆ ಯಲ್ಲಿ ತಿಳಿಸಿದೆ.
ಅದರಂತೆ ಕೃಷಿ ಇಲಾಖೆ ಸೇವಾ ಕೇಂದ್ರ ತೆರೆಯಲು ಅರ್ಜಿ ಕರೆದಿದೆ. ಸಾಮಾನ್ಯ ಶೇ.50 ಆಥವಾ ₹ 5 ಲಕ್ಷ ಹಾಗೂ ಎಸ್ಸಿಎಸ್ಟಿಗೆ ಶೇ.75 ಅಥವಾ ₹ 7.5 ಲಕ್ಷಸಾಲ ಸಹಾಯಧನ ಕೊಡಲಾಗುವುದು. ಇದರಿಂದ ಪಂಪ್ಸೆಟ್, ಬೋರ್ವೆಲ್, ಕೃಷಿ ಯಂತ್ರೋಪಕರಣ ಮತ್ತು ಸೂಕ್ಷ್ಮ ನೀರಾವರಿ ಘಟಕಗಳ ದುರಸ್ತಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯನ್ನು ಸಂಪರ್ಕಿಸಲು ತಿಳಿಸಿದೆ.
* *
ನದಿ. ಹಳ್ಳಕೊಳ್ಳ ತುಂಬಿದ್ದ ರಿಂದ ಬತ್ತಿ ಹೋದ ಕೊಳವೆ ಬಾವಿಗಳಲ್ಲಿ ನೀರು ಬರುತ್ತದೆ. ಇದ ರಿಂದ ನದಿ ತೀರದ ರೈತರು ಉತ್ತಮ ಬೆಳೆ ತೆಗೆಯಲು ಅನುಕೂಲವಾಗಲಿದೆ
ರವಿ ಸಜ್ಜನ
ಯುವರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.