ಹನೂರು: ಜನ್ಮದಿನ ಆಚರಣೆಯ ಸಂಭ್ರಮದಲ್ಲಿದ್ದ ಬೆಂಗಳೂರಿನ ಫ್ರೇಜರ್ಟೌನ್ನ ಯುವಕ ಭಾನುವಾರ ಮಧ್ಯಾಹ್ನ ಸ್ನೇಹಿತರೊಡನೆ ಈಜಲು ಹೋಗಿ ಮೃತಪಟ್ಟಿದ್ದಾರೆ. ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಕಾಲ್ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಂ (24) ಮೃತ ದುರ್ದೈವಿ. ಚಾಮರಾಜನಗರ ಜಿಲ್ಲೆಯ ಚಿಕ್ಕಲ್ಲೂರು ಗ್ರಾಮದ ದೇವಸ್ಥಾನದ ಹೊಸಮಠದ ಬಳಿಯ ಚೆಕ್ಡ್ಯಾಂನಲ್ಲಿ ಈ ದುರ್ಘಟನೆ ನಡೆದಿದೆ.
ಸಮೀಪದ ನರೀಪುರದಲ್ಲಿ ಇರುವ ತಮ್ಮ ಫಾರ್ಮ್ಹೌಸ್ನಲ್ಲಿ ಶನಿವಾರ 6 ಮಂದಿ ಸ್ನೇಹಿತರೊಂದಿಗೆ ವಾಸ್ತವ್ಯ ಹೂಡಿದ್ದ ಪ್ರೀತಂ, ಮಧ್ಯಾಹ್ನ 3.30ರ ಸುಮಾರಿಗೆ ಸ್ನೇಹಿತರ ಜತೆ ಚೆಕ್ಡ್ಯಾಂಗೆ ಈಜಲು ಇಳಿದಿದ್ದರು. ಆದರೆ, ಸರಿಯಾಗಿ ಈಜು ಬಾರದ ಅವರು ಮುಳುಗಿ ಮೃತಪಟ್ಟಿದ್ದಾರೆ.
ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ನುರಿತ ಈಜುಗಾರರ ಸಹಾಯದಿಂದ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಸುಮಾರು 10 ಅಡಿ ಆಳ ಇರುವ ಡ್ಯಾಂನ ತಳ ಭಾಗದಲ್ಲಿ ದೇಹ ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.