ಸಿದ್ದಾಪುರ: ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರಿಗೆ ಅವರ ಪಕ್ಷದಲ್ಲಿಯೇ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮಾಜಿ ಸಚಿವ ಬಿ.ಎ.ಜೀವಿಜಯ ಹೇಳಿದರು. ಭಾನುವಾರ ಮರಗೋಡು ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ‘ಚೀನಿ ವಸ್ತುಗಳನ್ನು ಬಹಿಷ್ಕರಿಸಿ’ ಎಂದು ಸಾರುವ ಮುನ್ನ, ಚೀನಿ ಸಾಮಗ್ರಿಗಳನ್ನು ಆಮದು ಮಾಡುವವರು ಯಾರು ಎಂದು ಪ್ರಶ್ನಿಸಬೇಕಿದೆ. ಜಿಲ್ಲೆಯಲ್ಲಿ ವಿಯೆಟ್ನಾಂ ಕರಿಮೆಣಸು ಸೇರಿದಂತೆ ಹಲವು ಉತ್ಪನಗಳನ್ನು ಆಮದು ಮಾಡಿಕೊಂಡಿರುವ ಕೇಂದ್ರ ಸರ್ಕಾರ ಸ್ಥಳೀಯ ಕೃಷಿಕರನ್ನು ವಂಚಿಸುತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸಿದೆ, ಜೆಡಿಎಸ್ ಸರ್ಕಾರ ಆಡಳಿತಕ್ಕೆ ಬಂದರೆ ರೈತರ ಸಾಲಮನ್ನಾ ಮಾಡಲಿದೆ ಎಂದು ಭರವಸೆ ನೀಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಸತೀಶ್ ಜೋಯಪ್ಪ ಮಾತನಾಡಿ, ಜಿಲ್ಲೆಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಕೃಷಿಕರ ಜೀವನದೊಂದಿಗೆ ಚೆಲ್ಲಾಟವಾಡುತಿದೆ ಎಂದು ಆರೋಪಿಸಿದರು.
ಮಡಿಕೇರಿ ಕ್ಷೇತ್ರದ ಪಕ್ಷದ ಮುಖಂಡ ಕೆ.ಎಂ.ಬಿ.ಗಣೇಶ್ ಮಾತನಾಡಿ, ಅಲ್ಪಸಂಖ್ಯಾತರ ಮನವೊಲಿಸುವ ವಿಫಲ ಪ್ರಯತ್ನಕ್ಕೆ ಕೈ ಹಾಕಿದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸತೊಡಗಿದ್ದು ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಅಮೆಮನೆ ಕಿಶು ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೊರೆದ 36 ಮಂದಿ ಮುಂಡೂಡಿ ನಂದಾ ನಾಣ್ಣಯ್ಯ ಹಾಗೂ ಬಿದ್ರುಪಣೆ ಮೋಹನ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ಮುಖಂಡರಾದ ತುಂತಾಜೆ ಗಣೇಶ್, ಪೂವಯ್ಯ, ರಾಜೇಶ್, ಸಿ.ಎಲ್.ವಿಶ್ವ, ಹರ್ಷ, ಪರಿಚನ ಗೌತಮ್, ಮುಂಡೋಡಿ ನಂದಾ ನಾಣ್ಣಯ್ಯ, ಮರಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿದುಪಣೆ ಮೋಹನ್, ಮತೀನ್ ಉಪಸ್ಥಿತರಿದ್ದರು.