ತುರುವೇಕೆರೆ: ತಾಲ್ಲೂಕಿನ ಮಲ್ಲಾಘಟ್ಟ ಕೆರೆಗೆ ಹೇಮಾವತಿ ನಾಲಾ ನೀರು ಹರಿಸಲು ಒತ್ತಾಯಿಸಿ ತಾಲ್ಲೂಕು ನೀರಾವರಿ ಹೋರಾಟ ಸಮಿತಿಯ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಶನಿವಾರ ಅಹೋರಾತ್ರಿ ಧರಣಿ ನಡೆಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಯುವ ಮುಖಂಡ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ’ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಕೇವಲ ಶಿರಾಕ್ಕೆ ಮಾತ್ರ ಮಂತ್ರಿಯಾಗಿದ್ದು, ಜಿಲ್ಲೆಯ ಉಳಿದ ಎಲ್ಲ ತಾಲ್ಲೂಕುಗಳನ್ನು ಮರೆತಿದ್ದಾರೆ’ ಎಂದು ದೂರಿದರು.
‘ತಾಲ್ಲೂಕಿನ ರೈತರು ತಮಗೆ ನೀರಿಲ್ಲದಂತೆ ಶಿರಾಕ್ಕೆ ನೀರು ಬಿಡುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೈಕಟ್ಟಿ ಕೂರುವಂತಾಗಿದೆ’ ಎಂದು ತಿಳಿಸಿದರು. ಬಳಿಕ ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಿ ಕೂಡಲೇ ನೀರು ಬಿಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ ಆ ವೇಳೆ ಎಂಜಿನಿಯರ್ ಇಲ್ಲದ್ದನ್ನು ಮನಗಂಡ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಉಪತಹಶೀಲ್ದಾರ್ ನಾಗಭೂಷಣ್ ಅವರಿಗೆ ಮನವಿ ಸಲ್ಲಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಅಹೋರಾತ್ರಿ ಧರಣಿ ಮುಂದುವರೆಸುವುದಾಗಿ ಕಾರ್ಯಕರ್ತರು ಹೇಳಿದರು. ಬೆಸ್ಕಾಂ ನಿರ್ದೇಶಕ ಬಿ.ಎಸ್.ವಸಂತ್ ಕುಮಾರ್, ಶಶಿಶೇಖರ್, ಡಾ.ನಂಜಪ್ಪ, ಎನ್.ಬಿ.ಈಶ್ವರ್ ಇದ್ದರು.