ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಅರ್ಜುನ್ ಹೊನ್ನಪ್ಪ ಮತ್ತು ಆಂಧ್ರಪ್ರದೇಶದ ಶ್ರೀವತ್ಸ ರಾಚಕೊಂಡ ಅವರು ಶ್ರೀಲಂಕಾದಲ್ಲಿ ನಡೆದ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಫೈನಲ್ ಹೋರಾಟದಲ್ಲಿ ಅರ್ಜುನ್ ಮತ್ತು ಶ್ರೀವತ್ಸ 6–4, 7–5ರ ನೇರ ಸೆಟ್ಗಳಿಂದ ವಿಯೆಟ್ನಾಂನ ಪೊವಾಂಗ್ ವ್ಯಾನ್ ಜುಯೆನ್ ಮತ್ತು ಹುಯಾಹ್ ತಿನ್ಹಾ ಅವರನ್ನು ಪರಾಭವಗೊಳಿಸಿದರು.
ಮೊದಲ ಸೆಟ್ನ ಆರಂಭದಿಂದಲೇ ಮಿಂಚಿನ ಆಟ ಆಡಿದ ಅರ್ಜುನ್ ಮತ್ತು ಶ್ರೀವತ್ಸ ಜೋಡಿ ಎಲ್ಲಾ ಸರ್ವ್ಗಳನ್ನು ಉಳಿಸಿಕೊಂಡಿತು. ಜೊತೆಗೆ ಎದುರಾಳಿಗಳ ಸರ್ವ್ಗಳನ್ನು ಮುರಿದು ಸೆಟ್ ತನ್ನದಾಗಿಸಿಕೊಂಡಿತು.
ಎರಡನೇ ಸೆಟ್ನಲ್ಲಿ ವಿಯೆಟ್ನಾಂನ ಆಟಗಾರರು ತಿರುಗೇಟು ನೀಡಬಹು ದೆಂದು ಅಂದಾಜಿಸಲಾಗಿತ್ತು. ಇದಕ್ಕೆ ಕರ್ನಾಟಕ ಮತ್ತು ಆಂಧ್ರದ ಜೋಡಿ ಅವಕಾಶ ನೀಡಲಿಲ್ಲ.
ಗುಣಮಟ್ಟದ ಆಟ ಮುಂದುವರಿ ಸಿದ ಅರ್ಜುನ್ ಮತ್ತು ಶ್ರೀವತ್ಸ ಅವರು ಶರವೇಗದ ಸರ್ವ್ ಮತ್ತು ಆಕರ್ಷಕ ಕ್ರಾಸ್ಕೋರ್ಟ್ ಹೊಡೆತಗಳ ಮೂಲಕ ಎದುರಾಳಿಗಳನ್ನು ಕಂಗೆಡಿಸಿದರು. 10ನೇ ಗೇಮ್ಗಳವರೆಗೂ ಪ್ರಬಲ ಪೈಪೋಟಿ ಒಡ್ಡಿದ ಪೊವಾಂಗ್ ಮತ್ತು ಹುಯಾಹ್ ಅವರು ಬಳಿಕ ಮಂಕಾದಂತೆ ಕಂಡರು.
ಎದುರಾಳಿಗಳು ಒತ್ತಡಕ್ಕೆ ಒಳಗಾಗಿರುವುದನ್ನು ಅರಿತ ಅರ್ಜುನ್ ಮತ್ತು ಶ್ರೀವತ್ಸ ಮುಂದಿನ ಎರಡೂ ಗೇಮ್ಗಳನ್ನು ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅರ್ಜುನ್ ಅವರು ಜೈನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.