ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಇದೇ ತಿಂಗಳ 22ರಿಂದ 26ರವರೆಗೆ 90ನೇ ನಾಡಹಬ್ಬ ಉತ್ಸವ ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ಜೋರಾಪುರ ತಿಳಿಸಿದರು.
‘ನಿತ್ಯ ಸಂಜೆ 6ಕ್ಕೆ ಕಾರ್ಯಕ್ರಮಗಳು ನಡೆಯಲಿವೆ. ಹಿಂದಿನಿಂದಲೂ ಸಾರ್ವಜನಿಕರ ಸಹಕಾರದಿಂದ ಉತ್ಸವವನ್ನು ಅರ್ಥಪೂರ್ಣವಾಗಿ ಸಂಘಟಿಸುತ್ತಿದ್ದೇವೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘22ರಂದು ಸಂಜೆ 6ಕ್ಕೆ ನಾಡದೇವಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪನೆಯೊಂದಿಗೆ ಎಸ್ಪಿ ಬಿ.ಆರ್. ರವಿಕಾಂತೇಗೌಡ ಉದ್ಘಾಟಿಸುವರು. ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಬಸವರಾಜ ಜಗಜಂಪಿ ಅವರು ನಾಡೋಜ ಏಣಗಿ ಬಾಳಪ್ಪ ಕುರಿತು ಮಾತನಾಡುವರು. ಹಾಸ್ಯಕಲಾವಿದರಾದ ಇಂದುಮತಿ ಸಾಲಿಮಠ ಹಾಗೂ ರವಿ ಭಜಂತ್ರಿ ಹಾಸ್ಯ ಕಾರ್ಯಕ್ರಮ ಪ್ರಸ್ತುತಪಡಿಸುವರು’ ಎಂದು ಹೇಳಿದರು.
‘23ರಂದು ಚೀನಾ ವಸ್ತುಗಳ ಬಹಿಷ್ಕಾರ ಹಾಗೂ ಜಿಎಸ್ಟಿ ವಿವರಣೆ ಕುರಿತು ವಕೀಲ ಎಂ.ಬಿ. ಝಿರಲಿ ಹಾಗೂ ಉದ್ಯಮಿ ರಾಜೇಂದ್ರ ಹರಕುಣಿ ವಿಷಯ ಮಂಡಿಸುವರು. ಕಾರಂಜಿಮಠದ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರಾಧ್ಯಾಪಕ ಗುರುಪಾದ ಮರಿಗುದ್ದಿ ಅಧ್ಯಕ್ಷತೆ ವಹಿಸುವರು’.
ಮೂಢನಂಬಿಕೆ ಜಾಗೃತಿ: ‘24ರಂದು ‘ಮೂಢನಂಬಿಕೆಗಳು ಹಾಗೂ ಅಂಧಶ್ರದ್ಧೆ’ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ಎಂ.ಡಿ. ವಕ್ಕುಂದ, ಪಿ.ಜಿ. ಕೆಂಪಣ್ಣವರ ತಿಳಿಸಿಕೊಡುವರು. ವೈದ್ಯ ಡಾ.ಎಚ್.ಬಿ. ರಾಜಶೇಖರ ಅಧ್ಯಕ್ಷತೆ ವಹಿಸುವರು. ನಂತರ ದಸರಾ ಕವಿಗೋಷ್ಠಿ ನಡೆಯಲಿದೆ. ಕವಿತಾ ಕುಸುಗಲ್, ಮೈತ್ರೇಯಿಣಿ ಗದಿಗೆಪ್ಪಗೌಡರ, ಪ್ರಿಯಾ ಪುರಾಣಿಕ, ನದೀಮ ಎ. ಸನದಿ, ಹೇಮಾ ಸೋನೊಳ್ಳಿ, ಪ್ರಭು ಹಿರೇಮಠ, ಸೋಮಶೇಖರ ಸೊಗಲದ, ಆಶಾ ಕಡಪಟ್ಟಿ, ಸಿದ್ದರಾಮ ತಳವಾರ, ದೀಪಿಕಾ ಚಾಟೆ, ಕೆ.ಎನ್. ದೊಡ್ಡಮನಿ, ಬಿ.ಎಸ್. ಜಗಾಪುರ ಕವನ ವಾಚಿಸುವರು’ ಎಂದು ವಿವರ ನೀಡಿದರು.
‘25ರಂದು ‘ಆಧುನಿಕ ಮಹಿಳೆಯ ಆತಂಕಗಳು’ ಕುರಿತು ಗೋಷ್ಠಿ ನಡೆಯಲಿದೆ. ಪ್ರಾಚಾರ್ಯರಾದ ನಿರ್ಮಲಾ ಬಟ್ಟಲ, ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ ಉಪನ್ಯಾಸ ನೀಡುವರು. ಕನ್ನಡ ಚಳವಳಿ ನಾಯಕ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು. 26ರಂದು ಚಿಂತಾಮಣಿ ಕೆ. ಜೋರಾಪುರ ವಿರಚಿತ ‘ಬೆಳಗಾವಿ ಕನ್ನಡ ಚಳವಳಿಗಳು ಹಾಗೂ ನಾಡಹಬ್ಬ’ ಪುಸ್ತಕವನ್ನು ಗದಗ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಬಿಡುಗಡೆ ಮಾಡುವರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು’ ಎಂದರು. ಸಮಿತಿ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ, ಗೌರವ ಸಲಹೆಗಾರ ಸಿದ್ದನಗೌಡ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.