ಕಲಬುರ್ಗಿ: ಬೆಂಗಳೂರಿನಲ್ಲಿ ಸೋಮವಾರ ನಿಧನರಾದ ಮಾಜಿ ಸಚಿವ, ಕಲಬುರ್ಗಿ ಉತ್ತರ ಮತ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಅವರ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ ತರಲಾಯಿತು.
ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆಯೇ ಕುಟುಂಬದ ಸದಸ್ಯರ ದುಃಖದ ಕಟ್ಟೆ ಒಡೆಯಿತು. ಇದಾದ ಬಳಿಕ ಇಸ್ಲಾಂ ಸಂಪ್ರದಾಯದಂತೆ ಅವರ ನಿವಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಇಲ್ಲಿನ ನ್ಯೂ ನೋಬಲ್ ಶಾಲೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅಂತಿಮ ಗೌರವ ಸಲ್ಲಿಸಿದರು.
ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯುತ್ತಿದ್ದು, ಅಗಲಿದ ನಾಯಕನನ್ನು ನೆನೆದು ಕಣ್ಣೀರಾದರು.