ಕಲಬುರ್ಗಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನನ್ನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮೇಶ ಜಾರಕಿಹೊಳಿ, ಯಾರು ಬೇಕಾದರೂ ಸ್ಪರ್ಧಿಸಬಹುದು. ಅವರಿಗೆ ಮುಕ್ತ ಮನಸ್ಸಿನಿಂದ ಸ್ವಾಗತ ಕೋರುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು ಅಪೇಕ್ಷೆ ಪಟ್ಟಿದ್ದಾರೆ. ಹೀಗಾಗಿ ವಿಜಯಪುರ ಅಥವಾ ಬಾಗಲಕೋಟೆ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ’ ಎಂದ ಅವರು, ಈ ಕುರಿತು ಹೈಕಮಾಂಡ್ ಕೂಡ ಸೂಚಿಸಿದೆ’ ಎಂದು ತಿಳಿಸಿದರು.
4-5 ದಿನದಲ್ಲಿ ದಾಖಲೆ ಬಿಡುಗಡೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು, ಕುಟುಂಬದ ಸದಸ್ಯರು, ನಾಲ್ಕು ಜನ ಸಚಿವರು, ಮೂವರು ಶಾಸಕರು ಮತ್ತು ಇಬ್ಬರು ಪ್ರಭಾವಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು 4-5 ದಿನದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು.
ಕೆಲ ದಾಖಲೆಗಳು ಲಭ್ಯವಾಗದ್ದರಿಂದ ವಿಳಂಬವಾಗಿತ್ತು. ಈಗ ಎಲ್ಲ ದಾಖಲೆಗಳೂ ಸಿಕ್ಕಿವೆ. ರಾಜ್ಯ ಸರ್ಕಾರದ ಮಾನವನ್ನು ಹರಾಜು ಹಾಕಲಾಗುವುದು’ ಎಂದು ಗುಡುಗಿದರು.