ಶನಿವಾರಸಂತೆ (ಕೊಡಗು ಜಿಲ್ಲೆ): ಹೋಬಳಿಯ ‘ನಮ್ಮ ಬೆಳೆಗಾರರ ಸ್ವಸಹಾಯ ಸಂಘ’ದ ನೇತೃತ್ವದಲ್ಲಿ ಬೆಳೆಗಾರರು ಒಂದುಗೂಡಿ ಕಾಫಿ ತೋಟಗಳಲ್ಲಿ ಶಂಖುಹುಳುಗಳ ನಾಶಕ್ಕಾಗಿ ಸ್ವಪ್ರೇರಣೆಯಿಂದ ದೇಣಿಗೆ ನೀಡುವ ಮೂಲಕ ‘ಹಿಡಿ– ಕೊಲ್ಲು’ ಕಾರ್ಯ ಕೈಗೊಂಡಿದ್ದಾರೆ.
ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಕೆರಳ್ಳಿ, ಹುಲುಸೆ ಗ್ರಾಮಗಳ 300 ಎಕರೆ ತೋಟಗಳಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಸಂಘದ ಪದಾಧಿಕಾರಿಗಳು, ಬೆಳೆಗಾರರು ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರ ಜತೆ ಸೇರಿ ಸಾಂಕೇತಿಕವಾಗಿ ಹುಳುಗಳನ್ನು ಸಂಗ್ರಹಿಸಿದರು.
ಹಾಕಿದ ಔಷಧಿ ತಿನ್ನಲು ಗುಂಪುಗೂಡಿ ಬಂದ ಶಂಖುಹುಳುಗಳನ್ನು ಬಕೆಟ್ಗಳಲ್ಲಿ ಸಂಗ್ರಹಿಸಿ ಚೀಲಗಳಲ್ಲಿ ತುಂಬಿಸಿದರು. ನಂತರ ಹುಳುಗಳು ತುಂಬಿದ ಚೀಲಗಳನ್ನು ಗುಂಡಿ ತೆಗೆದು ಕ್ರಿಮಿನಾಶಕ ಸುರಿದು ನಾಶಪಡಿಸಿದರು.