ಈಗ ಪತ್ರಿಕೆ, ಟಿ.ವಿ. ವಾಹಿನಿಗಳಲ್ಲಿ ಎಡಪಂಥೀಯ– ಬಲಪಂಥೀಯ, ವೀರಶೈವ–ಲಿಂಗಾಯತ ಚರ್ಚೆಗಳು ತಾರಕಕ್ಕೇರಿ ಸಿದ್ಧಾಂತ, ಧರ್ಮದ ಹೆಸರಿನಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ಪರಸ್ಪರ ಆರೋಪ, ಪ್ರತ್ಯಾರೋಪಗಳ ಕೆಸರೆರಚಾಟದಲ್ಲಿ ಮಂತ್ರಿಗಳು, ರಾಜಕಾರಣಿಗಳು, ಮಠಾಧಿಪತಿಗಳು ಅಖಾಡಕ್ಕಿಳಿದು, ವೈಯಕ್ತಿಕ ಚಾರಿತ್ರ್ಯಹರಣದಲ್ಲಿ ತೊಡಗಿದ್ದಾರೆ. ಜನರಿಗೆ ಇದೆಲ್ಲ ಮನರಂಜನೆಯಾಗಿ ಕಾಣಿಸುತ್ತಿದೆ.
ಗುರು– ವಿರಕ್ತ ಎಂದು ಗುದ್ದಾಡುತ್ತಿರುವ ಎರಡೂ ಬಣದವರು ‘ಎನಗಿಂತ ಕಿರಿಯರಿಲ್ಲ’ ಎಂದು ಸಾರಿದ ಬಸವಣ್ಣನನ್ನು ತಮ್ಮವನೆನ್ನುತ್ತಾರೆ. ಬಸವಣ್ಣನಿಗೆ ‘ಮಾರ್ಕೆಟ್ ವ್ಯಾಲ್ಯೂ’ ಇರುವುದರಿಂದ ಅವನ ತತ್ವಗಳನ್ನು ವಿರೋಧಿಸುವವರೂ ಅವನ ಫೋಟೊ ಹಾಕಿಕೊಂಡು ‘ಅವನು ಭಕ್ತ ಮಾತ್ರ, ಧರ್ಮ ಸಂಸ್ಥಾಪಕನಲ್ಲ, ಅವನು ನಮ್ಮ ಸರಿ ಸಮಾನನಲ್ಲ’ ಎಂದು ಪಲ್ಲಕ್ಕಿ ಹೊರುವ ಭಕ್ತರಿಗೆ ಬೋಧಿಸಿ ದಾರಿ ತಪ್ಪಿಸುತ್ತಿದ್ದಾರೆ. ಇದೇ ದುರಂತ!
‘ಹಿಂದೂ ಎಂದರೆ ‘ಬಲ’, ಲಿಂಗಾಯತ ಎಂದರೆ ‘ಎಡ’, ‘ವೀರಶೈವ ಎಂದರೆ ‘ಎಡಬಿಡಂಗಿ’ ಎಂದು ಚಂಪಾ ಹೇಳುತ್ತಾರೆ. ವೀರಶೈವ, ಲಿಂಗಾಯತ ಎರಡೂ ಬಣದವರು ಚುನಾವಣಾ ಪೂರ್ವ ‘ಧರ್ಮ ರಾಜಕಾರಣ’ದಲ್ಲಿ ಜಟಾಪಟಿ ನಡೆಸಿದ್ದಾರೆ. ಧರ್ಮದ ಹೆಸರಿನಲ್ಲಿ ವೋಟಿನ ರಾಜಕೀಯ ಇದು!