ಮುಂಬೈ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಸುಧಾಕರ್ ಚತುರ್ವೇದಿ ಮತ್ತು ಸುಧಾಕರ್ ದ್ವಿವೇದಿ ಅಲಿಯಾಸ್ ಶಂಕರಾಚಾರ್ಯ ಎಂಬಿಬ್ಬರ ವಿರುದ್ಧ ಸ್ಫೋಟ ಸಂಚಿನಲ್ಲಿ ಭಾಗಿಯಾದ ಆರೋಪ ಇದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆ. ಕ. ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರಿಗೆ ಈಗಾಗಲೇ ಜಾಮೀನು ದೊರೆತಿದೆ. ಪ್ರಜ್ಞಾ ಅವರಿಗೆ ಬಾಂಬೆ ಹೈಕೋರ್ಟ್ ಮತ್ತು ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿವೆ.
ನಾಸಿಕ್ ಜಿಲ್ಲೆಯ ಮಾಲೇಗಾಂವ್ನಲ್ಲಿ ದ್ವಿಚಕ್ರ ವಾಹನಕ್ಕೆ ಅಳವಡಿಸಿದ್ದ ಬಾಂಬ್ 2008ರ ಸೆಪ್ಟೆಂಬರ್ 29ರಂದು ಸ್ಫೋಟಗೊಂಡು ಆರು ಮಂದಿ ಮೃತಪಟ್ಟಿದ್ದರು. ಸುಮಾರು ನೂರು ಜನರು ಗಾಯಗೊಂಡಿದ್ದರು. ಪ್ರಕರಣದಲ್ಲಿ ಒಟ್ಟು 12 ಮಂದಿಯನ್ನು ಬಂಧಿಸಲಾಗಿತ್ತು.