ಚಂಡೀಗಡ: ಹರಿಯಾಣದ ಜಿಂದ್ ಜಿಲ್ಲೆಯ ಪಲ್ವಾನ್ ಗ್ರಾಮದಲ್ಲಿ ಹಲವು ದಿನಗಳ ಕಾಲ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿ ನಂತರ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ದಲಿತ ಸಮುದಾಯದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿದ್ದ ಬಾಲಕಿ ಸೋಮವಾರ ಹರಿಯಾಣದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಬಾಲಕಿ ಮೇಲೆ ಗ್ರಾಮದ ರಾಹುಲ್, ಪ್ರವೀಣ್ ಹಾಗೂ ಕಾಳ ಎನ್ನುವ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಘಟನೆ ನಡೆದ ದಿನವೇ ಬಾಲಕಿ ಈ ಕುರಿತು ಪೋಷಕರಿಗೆ ತಿಳಿಸಿದ್ದಳು. ಆದರೆ ಪೊಲೀಸರಿಗೆ ದೂರು ನೀಡುವ ಬದಲು ಮೂವರು ಆರೋಪಿಗಳ ಕುಟುಂಬದವರನ್ನು ಭೇಟಿ ಮಾಡಿದ ಬಾಲಕಿಯ ಪೋಷಕರು, ತಮ್ಮ ಮಗಳಿಗೆ ಶೋಷಣೆ ಮಾಡದಿರುವಂತೆ ಮನವಿ ಮಾಡಿದ್ದರು.
ಹೆಚ್ಚಿದ ಶೋಷಣೆ: ಬಾಲಕಿಯ ಪೋಷಕರ ಮನವಿಯಿಂದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಬದಲಿಗೆ ಬಾಲಕಿ ಮೇಲಿನ ಶೋಷಣೆ ಹೆಚ್ಚಾಯಿತು. ಬಾಲಕಿಯನ್ನು ತಮ್ಮ ‘ಜತೆಗೆ’ ಬರುವಂತೆ ಆರೋಪಿಗಳು ಶೋಷಿಸುತ್ತಿದ್ದರು. ಇದಕ್ಕೆ ನಿರಾಕರಿಸಿದಾಗ, ಘಟನೆ ಕುರಿತು ಆರೋಪಿಗಳು ಬಾಲಕಿಯ ಮನೆ ಹೊರಗೆ ಅವಹೇಳನಕಾರಿಯಾಗಿ ಚಿತ್ರ ಬಿಡಿಸುತ್ತಿದ್ದರು. ತಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾದರೆ, ತಮ್ಮ ‘ಜತೆಗೆ’ ಬರಲು ನಿರಾಕರಿಸಿದರೆ ಸಾಮಾಜಿಕವಾಗಿ ಮತ್ತಷ್ಟು ಅವಮಾನ ಮಾಡುವುದಾಗಿ ಬೆದರಿಸುತ್ತಿದ್ದರು. ಈ ಅವಮಾನ ಸಹಿಸಲಾಗದೆ ಬಾಲಕಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ದುಃಖ ವ್ಯಕ್ತಪಡಿಸಿದ ತಂದೆ
ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದರೆ, ಬಳಿಕ ಮಗಳು ಸಾಮಾಜಿಕವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಭಯದಿಂದ ದೂರು ನೀಡಲಿಲ್ಲ ಎಂದು ಬಾಲಕಿ ತಂದೆ ದುಃಖ ವ್ಯಕ್ತಪಡಿಸಿದ್ದಾರೆ.
ಶೀಘ್ರ ಬಂಧನ
ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಅತ್ಯಾಚಾರ, ಅಪರಾಧ ಸಂಚು, ಎಸ್ಸಿ/ಎಸ್ಟಿ ಕಾಯಿದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳ ಮೇಲೆ ಇವರ ವಿರುದ್ಧ ಭಾರತೀಯ ದಂಡಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುತ್ತದೆ’ ಎಂದು ಜಿಂದ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಮುಖ್ಯಾಂಶಗಳು
* ಬಾಲಕಿ ಮನೆ ಹೊರಗೆ ಅವಹೇಳನಕಾರಿ ಚಿತ್ರ ಬಿಡಿಸುತ್ತಿದ್ದ ಆರೋಪಿಗಳು
* ಪೊಲೀಸರಿಗೆ ದೂರು ನೀಡಿದರೆ ಮತ್ತಷ್ಟು ಅವಮಾನಿಸುವುದಾಗಿ ಬೆದರಿಕೆ
* ಕಿರುಕುಳದಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.