ನವದೆಹಲಿ: ಈ ಬಾರಿ ಕರ್ನಾಟಕದಲ್ಲಿ ಮಳೆ ಕೊರತೆ ಉಂಟಾಗಿದೆ. ಇದರಿಂದ ಮುಂಗಾರು ಹಂಗಾಮು ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಶೇ 25 ರಷ್ಟು ಇಳಿಕೆ ಕಾಣುವ ಸಂಭವ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
2017–18ನೇ ಬೆಳೆ ವರ್ಷದಲ್ಲಿ (ಜುಲೈ–ಜೂನ್) 73 ಲಕ್ಷ ಹಕ್ಟೇರ್ಗಳಲ್ಲಿ ಮುಂಗಾರು ಬಿತ್ತನೆಯ ನಿರೀಕ್ಷೆ ಹೊಂದಲಾಗಿತ್ತು. ಆದರೆ, 60 ಲಕ್ಷ ಹೆಕ್ಟೇರ್ಗಳಲ್ಲಿ ಮಾತ್ರವೇ ಬಿತ್ತನೆ ಕಾರ್ಯ ನಡೆದಿದೆ.
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕ್ರಮವಾಗಿ ಶೇ 5 ಮತ್ತು ಶೇ 38 ರಷ್ಟು ಕಡಿಮೆ ಮಳೆಯಾಗಿದೆ. ಹೀಗಾಗಿ ಸಮರ್ಪಕವಾಗಿ ಬಿತ್ತನೆ ಕಾರ್ಯ ನಡೆದಿಲ್ಲ. ಒಟ್ಟಾರೆ ಶೇ 5 ರಷ್ಟು ಕಡಿಮೆ ಮಳೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಸಮಾವೇಶದಲ್ಲಿ, ಹಿಂಗಾರು ಅವಧಿಯಲ್ಲಿ ಬಿತ್ತನೆ ಯೋಜನೆ ರೂಪಿಸುವ ಕುರಿತು ಚರ್ಚೆ ನಡೆಯಿತು. ಆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತಡವಾಗಿ ಮಳೆ ಸುರಿಯುತ್ತಿರುವುದರಿಂದ ರಾಗಿ ಮತ್ತು ತೊಗರಿ ಬಿತ್ತನೆಗೆ ಉತ್ತೇಜನ ದೊರೆತಿದೆ. ಇನ್ನೂ 2 ರಿಂದ 3ಲಕ್ಷ ಹೆಕ್ಟೇರ್ಗಳಲ್ಲಿ ಈ ಧಾನ್ಯಗಳ ಬಿತ್ತನೆ ನಿರೀಕ್ಷೆ ಮಾಡಲಾಗಿದೆ.