ದೇವದುರ್ಗ: ತಾಲ್ಲೂಕಿನ ಅಂಜೆಸೂಗೂರು ಹೊರವಲಯ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 160 ಮೆಟ್ರಿಕ್ ಟನ್ ಮರಳನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ.
ಮರಳು ಅಕ್ರಮ ಸಂಗ್ರಹ ಕುರಿತು ಮಾಹಿತಿ ಆಧರಿಸಿ ಇನ್ಸ್ಪೆಕ್ಟರ್ ದೌಲತ್ ಎನ್.ಕುರಿ ಮತ್ತು ಸಬ್ ಇನ್ಸ್ಪೆಕ್ಟರ್ ಬಿ.ಎಸ್.ಹೊಸಳ್ಳಿ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಪಡೆದ ನಂತರ ಕೂಡಲೇ ಅದನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಸಂಗ್ರಹಿಸಿ ಇಡಲಾಗಿದ್ದ ಸ್ಥಳದ ಮಾಲೀಕರು ಮತ್ತು ಇತರರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.