ಚಿಕ್ಕಮಗಳೂರು: ತಾಲ್ಲೂಕಿನ ಕಳಸಾ ಪುರ ಬಳಿಯ ನಾಗರಹಳ್ಳಿಯ ಗೋಮಾಳ ಜಾಗದಲ್ಲಿ ಮಂಗಳವಾರ ಮಧ್ಯಾಹ್ನ ಬೇಸಾಯಕ್ಕೆ ಮುಂದಾಗಿದ್ದ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯೊಂದಿಗೆ ಜಟಾಪಟಿ ನಡೆಸಿದ್ದಾರೆ.
ಈ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು, ಇಲ್ಲಿ ಬೇಸಾಯ ಮಾಡುವಂತಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಗಾದೆ ತೆಗೆದಿದ್ದಾರೆ ಎಂದು ಗ್ರಾಮಸ್ಥರು ದೂಷಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಈ ಜಾಗದಲ್ಲಿ ಬೇಸಾಯಕ್ಕೆ ಮುಂದಾದವರನ್ನು ಅರಣ್ಯ ಸಿಬ್ಬಂದಿ ತಡೆದಿದ್ದಾರೆ. ಆಗ ವಾಗ್ವಾದ ನಡೆದಿದೆ.
ಹಲವಾರು ವರ್ಷಗಳಿಂದ ಈ ಜಾಗದ ವ್ಯಾಜ್ಯ ಇದೆ. ರೈತರು ಮತ್ತು ಅರಣ್ಯ ಇಲಾಖೆಯವರು ಕೋರ್ಟ್ನಲ್ಲಿ ಮನವಿ, ಮೇಲ್ಮನವಿ ಸಲ್ಲಿಸಿದ್ದಾರೆ. ಜಾಗದಲ್ಲಿ ಬೇಸಾಯ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ನಾಗರಹಳ್ಳಿಯ ಕೆಲ ಗ್ರಾಮಸ್ಥರು ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.