ಉಪ್ಪಿನಂಗಡಿ: ಪಡುಮಲೆಯಲ್ಲಿ ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಮಾಡಿರುವವರ ವಿರುದ್ಧ ತಣ್ಣೀರುಪಂಥ ಗ್ರಾಮದ ಮರಿಪ್ಪಾದೆ ಬ್ರಹ್ಮ ಬೈದರ್ಕಳ ಗರಡಿಯ ಭಕ್ತರು ಮತ್ತು ಕೋಟಿ-ಚೆನ್ನಯ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಕಲ್ಲೇರಿ ಸಮುದಾಯ ಭವನದಲ್ಲಿ ಖಂಡನಾ ಸಭೆ ಸೋಮವಾರ ನಡೆಯಿತು.
ಬ್ರಹ್ಮ ಬೈದರ್ಕಳ ಗರಡಿಯ ಮೊಕ್ತೇಸರ ಬಿ. ನಿರಂಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ತುಳುನಾಡಿನ ಕಾರಣಿಕ ಪುರುಷರಾದ ಕೋಟಿ-ಚೆನ್ನಯ್ಯರ ತಾಯಿ ದೇಯಿ ಬೈದೆತಿಯ ಮೂರ್ತಿಗೆ ಅಪಮಾನ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು, ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕೆಡಿಸುವವರಿಗೆ ಇಂದಿನ ಈ ಸಭೆಯ ಮೂಲಕ ಎಲ್ಲಾ ಜಾತಿ, ಧರ್ಮದವರು ಸೇರಿ ಖಂಡಿಸಿರುವುದು ಸೂಕ್ತ ಉತ್ತರವನ್ನು ನೀಡಿದಂತಾಗಿದೆ’ ಎಂದರು.
ತಣ್ಣೀರುಪಂಥ ಗ್ರಾಮ ಪಂಚಾಯಿತಿ ಸದಸ್ಯ ಅಯೂಬ್ ಮಾತನಾಡಿ, ಸಾಮಾಜಿಕ ಜಾಲತಾಣ ಮೂಲಕ ಪವಿತ್ರ ಕ್ಷೇತ್ರಗಳನ್ನು, ದೇವರನ್ನು ನಿಂದಿಸುವ ಮೂಲಕ ಸಮಾಜದ ಸಾಮರಸ್ಯವನ್ನು ಕೆಡಿಸುವ ಯಾವ ವ್ಯಕ್ತಿಯೇ ಆಗಲಿ ಆತನ ಜಾತಿ, ಧರ್ಮ ನೋಡದೆ ಖಂಡಿಸುವ ಕೆಲಸವಾಗಬೇಕು ಎಂದರು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ರಾಜಾರಾಮ, ತಣ್ಣೀರುಪಂಥ ಕೃಷಿಪತ್ತಿನ ಸಂಘದ ನಿರ್ದೇಶಕರಾದ ಉಂಡೆಮನೆ ನಾರಾಯಣ ಭಟ್, ನವಚೇತನ ಸಂಘಟನೆ ಅಧ್ಯಕ್ಷ ದುಗ್ಗಪ್ಪ ಗೌಡ, ತಣ್ಣೀರುಪಂಥ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯವಿಕ್ರಮ, ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಾತನಾಡಿದರು.
ಮರಿಪ್ಪಾದೆ ಗರಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಜಿತ್ಕುಮಾರ್, ಸಿ.ಎ. ಬೇಂಕ್ ನಿರ್ದೆಶಕ ಪೂವಪ್ಪ ಬಂಗೇರ, ಕೋಟಿ ಚೆನ್ನಯ್ಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜಯರಾಮ ಸಾಲಿಯಾನ್ ಇದ್ದರು. ಖಂಡನಾ ನಿರ್ಣಯವನ್ನು ತಣ್ಣೀರುಪಂಥ ಗ್ರಾಮಕರಣಿಕ ಮಲ್ಲೇಶ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಇಳಂತಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನೋಹರ ಕುಮಾರ್ ಸ್ವಾಗತಿಸಿ, ವಂದಿಸಿದರು.