ಶಿರ್ವ:‘ ತಾನು ಕಡುಕಷ್ಟದಲ್ಲಿದ್ದರೂ ರವಿ ಕಟಪಾಡಿ ಅವರು ವೇಷ ಹಾಕಿ ಇತರರ ಸೇವೆಗೆ ಮುಂದಾಗಿ ನಿಜವಾದ ಹೀರೋ ಎನಿಸಿದ್ದಾರೆ’ ಎಂದು ಕೇಮಾರು ಸಾಧನಾಶ್ರಮದ ಈಶವಿಠಲದಾಸ ಸ್ವಾಮೀಜಿ ತಿಳಿಸಿದರು. ಅನಾರೋಗ್ಯಕ್ಕೀಡಾದ 7 ಮಂದಿ ಮಕ್ಕಳ ಚಿಕಿತ್ಸೆಗಾಗಿ ₹ 5,12745 ಹಣವನ್ನು ಮಂಗಳವಾರ ಫಲಾನುಭವಿಕುಟುಂಬ ಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
‘ಸರ್ಕಾರ ರವಿ ಕಟಪಾಡಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ರಾಜ್ಯ ಪ್ರಶಸ್ತಿಯನ್ನು ಕೊಟ್ಟರೂ ಕೂಡಾ ರವಿ ಅಲ್ಲಿ ಸಿಗುವ ಹಣವನ್ನು ಬಡವರ ನೆರವಿಗೆ ನೀಡುವ ಮನೋಭಾವ ಉಳ್ಳವರಾಗಿದ್ದಾರೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಅವರು ಮಾತನಾಡಿ, ‘ರವಿ ಕಟಪಾಡಿ ಅವರು ಸಮಾಜಿಕ ಕಳಕಳಿಯಿಂದ ದೇವರು ಮೆಚ್ಚುವ ಸಾಧನೆಯನ್ನು ಮಾಡಿ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ. ಸಾರ್ವಜನಿಕ ನೆಲೆಯಲ್ಲಿ ಇವರ ಜನಸೇವೆಯ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಖಂಡಿತಾ ದೊರೆಯಲು ಸಾಧ್ಯ’ ಎಂದವರು.
ಕಟಪಾಡಿ ಎಸ್.ವಿ.ಎಸ್.ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮಹೇಶ್ ಶೆಣೈ ಅಧ್ಯಕ್ಷತೆವಹಿಸಿ ಶುಭಹಾರೈಸಿದರು. ರವಿ ಫ್ರೆಂಡ್ಸ್ ಮುಖ್ಯಸ್ಥ, ವೇಷಧಾರಿ ರವಿ ಕಟಪಾಡಿ ಮಾತನಾಡಿ, ತನ್ನ ಉಸಿರಿರುವ ತನಕ ತನ್ನ ಬಳಗದೊಂದಿಗೆ ಸೇರಿಕೊಂಡು ಅರ್ಹ ಅನಾರೋಗ್ಯ ಪೀಡಿತರಿಗೆ ನೆರವು ನೀಡುವುದಾಗಿ ತಿಳಿಸಿದರು.