ಭಾಲ್ಕಿ: ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಸೆ.24ರಂದು ಕಲಬುರ್ಗಿಯ ಎನ್ವಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಲಿಂಗಾಯತ ಮಹಾರ್ಯಾಲಿಯಲ್ಲಿ ಐದು ಲಕ್ಷ ಬಸವ ಭಕ್ತರು ಸೇರುವ ನಿರೀಕ್ಷೆ ಇದೆ’ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಇಲ್ಲಿನ ಚನ್ನಬಸವಾಶ್ರಮದಲ್ಲಿ ಮಂಗಳವಾರ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ‘ಈ ಮುಂಚೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಬೀದರ್, ಬೆಳಗಾವಿ, ಲಾತೂರ್ ಪಟ್ಟಣಗಳಲ್ಲಿ ಆಯೋಜಿಸಿದ್ದ ರ್ಯಾಲಿ, ಸಮಾವೇಶಗಳು ಯಶಸ್ವಿ ಆಗಿವೆ. ಅದೇ ರೀತಿ ಕಲಬುರ್ಗಿಯಲ್ಲಿ ನಡೆಯಲಿರುವ ಸಮಾವೇಶ, ರ್ಯಾಲಿ ಸಹ ಯಶಸ್ವಿಯಾಗಲಿದೆ’ ಎಂದರು.
‘ಗದಗ, ಚಿತ್ರದುರ್ಗ, ಬೆಳಗಾವಿ ಶ್ರೀಗಳು, ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಸೇರಿದಂತೆ ಅನೇಕ ಪ್ರಮುಖರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾಭಿಮಾನಿ ಭಕ್ತರ ನಿರಂತರ ಹೋರಾಟದಿಂದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವುದು ಸತ್ಯ’ ಎಂದು ನುಡಿದರು.
‘ಬಸವ ಪರಂಪರೆಯುಳ್ಳ ಮಠಗಳೂ ಸಹ ರ್್ಯಾಲಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದನೀಯ ಸಂಗತಿ. ಲಿಂಗಾಯತ-ವೀರಶೈವ ಎರಡೂ ಒಂದೇ ಎಂದು ವಾದಿಸುವವರಿಗೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿದರೆ ಏನು ತಪ್ಪಾಗುತ್ತದೆ’ ಎಂದು ಖಾರವಾಗಿ ಪ್ರಶ್ನಿಸಿದರು.
ಸಚಿವ ಕಾಗೋಡು ತಿಮ್ಮಪ್ಪ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವುದು ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕುರಿತು ನೀಡಿದ ಹೇಳಿಕೆಯನ್ನು ಪಟ್ಟದ್ದೇವರು ಖಂಡಿಸಿದರು.
ಪ್ರಮುಖರಾದ ಕಿರಣ ಖಂಡ್ರೆ ಮಾತನಾಡಿ, ‘ಮಹಾ ರ್ಯಾಲಿಯಲ್ಲಿ ಭಾಗವಹಿಸುವ ಭಕ್ತರಿಗಾಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಸೆ.24ರ ಬೆಳಿಗ್ಗೆ 7 ಗಂಟೆಗೆ ಚನ್ನಬಸವಾಶ್ರಮದಿಂದ ವಾಹನಗಳು ಹೊರಡುತ್ತವೆ’ ಎಂದು ತಿಳಿಸಿದರು. ಸಿದ್ರಾಮಪ್ಪ ವಂಕೆ, ಶ್ರೀಕಾಂತ ಭೂರಾಳೆ, ಓಂಪ್ರಕಾಶ ರೊಟ್ಟೆ ಮಾತನಾಡಿದರು.
ಗುರುಬಸವ ಪಟ್ಟದ್ದೇವರು, ಬಸವಲಿಂಗ ಸ್ವಾಮೀಜಿ, ರೇಖಾಬಾಯಿ ಅಷ್ಟೂರೆ, ಸಂಗಮೇಶ್ವರಿ ಸ್ವಾಮಿ, ಜಗದೀಶ ಖಂಡ್ರೆ, ರಾಚಪ್ಪ ಗೋರ್ಟೆ, ವಿಜಯಕುಮಾರ ಪಾಟೀಲ, ಅಶೋಕ ಮೈನಾಳೆ, ಶ್ರೀಮಂತ ಪಾಟೀಲ, ಸೋಮನಾಥ ಹೊಸಾಳೆ ಗಣಪತಿ ಬಾವಗೆ, ಸಂತೋಷ ಹಡಪದ, ರಾಜು ಜುಬರೆ ಇದ್ದರು. ವೀರಣ್ಣ ಕುಂಬಾರ ಪ್ರಾರ್ಥನೆ ಗೀತೆ ಹಾಡಿದರು. ಮಲ್ಲಮ್ಮ ಪಾಟೀಲ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.