ಮಂಗಳೂರು: ಇಲ್ಲಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಗುರುವಾರ ಮಧ್ಯಾಹ್ನ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ಮಂಗಳೂರು ದಸರಾ ಆರಂಭಗೊಳ್ಳಲಿದೆ.
ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕುದ್ರೋಳಿ ದೇವಸ್ಥಾನದ ಆವರಣ ಪ್ರವಾಸಿಗರನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಸೆಳೆಯಲು ಸಜ್ಜಾಗಿದ್ದು, ಅನ್ನಸಂತರ್ಪಣೆ, ಸಂಜೆ ಹೊತ್ತಲ್ಲಿ ನಡೆಯುವ ದೇಶ, ವಿದೇಶ ಖ್ಯಾತಿಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವಕ್ಕೆ ಮತ್ತಷ್ಟು ಕಳೆ ಕಟ್ಟಲಿವೆ.
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಇದೇ 30ರಂದು ಸಂಜೆ 4 ಗಂಟೆಗೆ ಮಂಗಳೂರು ದಸರಾ ಮೆರವಣಿಗೆ ಆರಂಭವಾಗಲಿದೆ.
ಶಾರದಾ ಮಾತೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ 75ಕ್ಕೂ ಅಧಿಕ ಸ್ತಬ್ಧಚಿತ್ರಗಳು, ಹುಲಿವೇಷಗಳು ಗಮನ ಸೆಳೆಯಲಿವೆ. ಸುಮಾರು 6 ಕಿ.ಮೀ.ಉದ್ದಕ್ಕೆ ಸಾಗುವ ಶೋಭಾಯಾತ್ರೆಯ ಕೊನೆಯಲ್ಲಿ ಕುದ್ರೋಳಿ ದೇವಸ್ಥಾನದ ಪುಷ್ಕರಿಣಿಯಲ್ಲಿ ಅಕ್ಟೋಬರ್ 1ರ ಬೆಳಿಗ್ಗೆ ಶಾರದೆ ಮತ್ತು ನವದುರ್ಗೆಯರ ವಿಸರ್ಜನೆ ನಡೆಯಲಿದೆ.
ದಸರಾ ಆರಂಭವಾದರೂ ಶಾಲೆಗಳಿಗೆ ರಜೆ ಇಲ್ಲ ಎಂಬ ಕೊರಗು ಇದುವರೆಗೆ ಕಾಡುತ್ತಿತ್ತು. ಆದರೆ ಸ್ಥಳೀಯರ ಒತ್ತಾಯದ ಮೇರೆಗೆ ಸರ್ಕಾರ ದಸರಾ ರಜೆಯನ್ನು ಮೂರು ಜಿಲ್ಲೆಗಳಲ್ಲಿ ಬದಲಿಸಿದೆ. ಇದರಿಂದ ಮಂಗಳೂರು ದಸರಾವನ್ನು ಸವಿಯುವ ಜನರ ಬಯಕೆ ಈಡೇರಿದೆ.