ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲಿ ರಾಷ್ಟ್ರಗಳಲ್ಲಿ ‘ಮಾರ್ಚ್ 22’ ಬಿಡುಗಡೆ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅನಂತ್ ನಾಗ್‌ ಅಭಿನಯದ ‘ಮಾರ್ಚ್ 22’ ಸಿನೆಮಾ ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಹಲವೆಡೆ ಅಕ್ಟೊಬರ್ 6ರಂದು ಬಿಡುಗಡೆಯಾಗುತ್ತಿದೆ. ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ ಅನಂತ್ ನಾಗ್, ಅವರ ಪತ್ನಿ ಗಾಯತ್ರಿ ಅನಂತ್ ನಾಗ್, ನಟಿ ರಾಧಿಕಾ ಚೇತನ್ ಪಾಲ್ಗೊಳ್ಳಲಿದ್ದಾರೆ.

‘ಅಜ್ಜ’ ಹಾಡಿನ ಚಿತ್ರೀಕರಣ

ಕೆ.ಪಿ. ಚಿದಾನಂದ್ ನಿರ್ಮಿಸುತ್ತಿರುವ ‘ಅಜ್ಜ’ ಚಿತ್ರದ ಹಾಡಿನ ಚಿತ್ರೀಕರಣ ಉಡುಪಿ, ಹೊನ್ನಾವರ, ಮಡಿಕೇರಿಯಲ್ಲಿ ನಡೆದಿದೆ. ಹಾಡಿನ ಚಿತ್ರೀಕರಣ ‘ರಿಚ್’ ಆಗಿ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಡ್ರೋನ್‌, ಜಿಮ್ಮಿ ಕ್ಯಾಮೆರಾಗಳನ್ನು ಉಪಯೋಗಿಸಿ ಮೂರು ದಿನಗಳ ಅವಧಿಯಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ.

ದೀಪಕ್‍ ರಾಜ್, ರಾಜ್‍ ಪ್ರವೀಣ್, ಮಾಧುರಿ, ಅಶ್ವಿನಿ ಅವರು ಈ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ದತ್ತಣ್ಣ, ಬೇಬಿ ಪೃಥ್ವಿಶ್ರೀ, ಲತೀಶ್‍ ಕೂರ್ಗ್ ಅವರು ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಅಜ್ಜ’ ಚಿತ್ರದ ಕಥೆ ಅತ್ಯಂತ ರೋಚಕವಾಗಿಯೂ, ಭಿನ್ನವಾಗಿಯೂ ಇದೆ ಎಂಬುದು ತಂಡದ ಅಂಬೋಣ. ವೇಮಗಲ್‍ ಜಗನ್ನಾಥ್‍ ರಾವ್ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಹಣ ರಾಜು ಶಿರಾಳಕೊಪ್ಪ ಅವರದ್ದು. ಸಾಯಿಕಿರಣ್ ಸಂಗೀತ, ಶಿವಪ್ರಸಾದ್‍ ಯಾದವ್ ಸಂಕಲನ ಚಿತ್ರಕ್ಕಿದೆ.

‘...ಚಂದಾದಾರರು’ಗೆ ಭವ್ಯಾ ಬಂದಿದ್ದಾರೆ...!

‘ನೀವು ಕರೆ ಮಾಡಿರುವ ಚಂದಾದಾರರು ಬಿಜಿಯಾಗಿದ್ದಾರೆ’ ಚಿತ್ರದ ಚಿತ್ರೀಕರಣ ಅಕ್ಟೋಬರ್ 10ರಿಂದ ಆರಂಭವಾಗಲಿದೆ.

ಸಿನಿಮಾ ಪ್ರೇಮ ಮತ್ತು ಒಂದು ಒಳ್ಳೆಯ ಚಿತ್ರ ಮಾಡಬೇಕು ಎಂಬ ಕನಸು ಹೊತ್ತಿರುವ ಮಧುಸೂಧನ್ ತಮ್ಮ ಗೆಳೆಯರ ಸಹಕಾರ ಪಡೆದು, ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆಧುನಿಕ ಜಂಜಡಗಳ ಪರಿಣಾಮವಾಗಿ ಸವಕಲಾಗುತ್ತಿರುವ ಮನುಷ್ಯ ಸಂಬಂಧಗಳ ಸುತ್ತ ಹೆಣೆದಿರುವ ಕಥೆ ಈ ಸಿನಿಮಾದಲ್ಲಿ ಇರಲಿದೆಯಂತೆ. ಸ್ಯಾಮ್‍ವೆಲ್ ಟೋನಿ ಇದರ ನಿರ್ದೇಶನ ಮಾಡಲಿದ್ದಾರೆ.

ದೇವರಾಜ್, ಶ್ರುತಿ, ತಾರಾ, ಪೂಜಾ, ಶೀತಲ್ ಶೆಟ್ಟಿ ಮುಂತಾದವರು ತಾರಾಗಣದಲ್ಲಿ ಇರಲಿದ್ದಾರೆ. ಈಗ ಹಿರಿಯ ನಟಿ ಭವ್ಯಾ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲು ಒಪ್ಪಿಕೊಂಡಿದ್ದಾರಂತೆ. ಬದುಕಿನ ಒತ್ತಡಗಳ ನಡುವೆ ಬಹುತೇಕರು ತಮಗೆ ಅರಿವಿಲ್ಲದಂತೆಯೇ ಹತ್ತಿರದ ಸಂಬಂಧಗಳಿಂದಲೂ ದೂರ ನಿಂತಿರುತ್ತಾರೆ. ಹೀಗೆ ಸಡಿಲವಾಗುವ ಸಂಬಂಧಗಳನ್ನು ಪುನಃ ಸರಿಯಾಗಿಸುವುದು ಎಷ್ಟು ಕಷ್ಟ ಎಂಬುದನ್ನು ಸಿನಿಮಾ ಮೂಲಕ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.

ದೇವರಾಜ್‌ ಅವರನ್ನು ಹಿಂದೆಂದೂ ಕಂಡಿರದ ಗೆಟಪ್‌ನಲ್ಲಿ ಈ ಸಿನಿಮಾದಲ್ಲಿ ನೋಡಬಹುದು ಎಂದು ಚಿತ್ರತಂಡ ಹೇಳಿದೆ. ಅಂದಹಾಗೆ, ದೇವರಾಜ್ ಅವರ ಗೆಟಪ್‌ ಬದಲಿಸಲು ನುರಿತ ಮೇಕಪ್‌ ತಂಡ ಮುಂಬೈನಿಂದ ಬಂದಿದೆಯಂತೆ. ಗೆಟಪ್ ಬದಲಿಸಿಕೊಳ್ಳಲು ದೇವರಾಜ್ ಕೂಡ ತಾಲೀಮು ಆರಂಭ ಮಾಡಿದ್ದಾರಂತೆ. ಸುಬ್ಬಯ್ಯ ಕುಟ್ಟಪ್ಪ ಛಾಯಾಗ್ರಹಣ ಇರುವ ಈ ಸಿನಿಮಾದ ಚಿತ್ರೀಕರಣ ಅಕ್ಟೋಬರ್ ಹತ್ತರಿಂದ ಶುರುವಾಗಲಿದೆ. ಬೆಂಗಳೂರು ಮಾತ್ರವೇ ಅಲ್ಲದೆ ಗೋವಾ ಹಾಗೂ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡ ತಯಾರಿ ಮಾಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT